![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪ್ರತಿಷ್ಠಿತ ಏಷಿಯನ್ ಆಫ್ರಿಕನ್ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ವತಿಯಿಂದ ಕೊಡಮಾಡುವ ೨೦೨೨ನೇ ಸಾಲಿನ ವಾಣಿಜ್ಯೋದ್ಯಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಉದ್ಯಮಿ ಡಾ.ಅಶ್ರಫ್ ಕಮ್ಮಾಡಿ ಅವರು ಎ.೨೪ರಂದು ದೆಹಲಿಯ ಇಂಡಿಯನ್ ಇಂಟರ್ ನ್ಯಾಶನಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ನೈಜೀರಿಯಾದ ಭಾರತದ ರಾಯಭಾರಿ ಮಹೇಶ್ ಸಚ್ಚಿದೇವ್ ಅವರು ಡಾ.ಅಶ್ರಫ್ ಕಮ್ಮಾಡಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಸಿ.ಆರ್ ಚೌಧರಿ, ಏಷಿಯನ್ ಆಫ್ರಿಕನ್ ಛೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಯ ಅಧ್ಯಕ್ಷ ಜಿ.ಡಿ ಸಿಂಗ್, ಸಾಲಿಟರಿ ಜನರಲ್ ಡಾ. ನೀತು ಸಿಂಗ್ ಹಾಗೂ ದೇಶ ವಿದೇಶಗಳ ಹಲವು ಗಣ್ಯರು ಉಪಸ್ಥಿತರಿದ್ದರು.
ಡಾ.ಅಶ್ರಫ್ ಕಮ್ಮಾಡಿ ಅವರು ಜೆಮ್ಸ್ ಆಂಡ್ ಜುವೆಲ್ಲರಿ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದು ಉದ್ಯಮ ಕ್ಷೇತ್ರದ ಸಾಧನೆಗಾಗಿ ಈಗಾಗಲೇ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
೨೦೧೫ರಲ್ಲಿ ಆಶ್ಕೋ ಇನ್ವೆಸ್ಟ್ಮೆಂಟ್ ಲಿಮಿಟೆಡ್ ಕಂಪೆನಿಯನ್ನು ಹಾಂಕಾಂಗ್ನಲ್ಲಿ ಸ್ಥಾಪಿಸಿ ಬೇಸ್ ಮೆಟಲ್ ಹಾಗೂ ಜೆಮ್ಸ್ ವ್ಯವಹಾರ ಆರಂಭಿಸಿದ್ದ ಡಾ.ಅಶ್ರಫ್ ಕಮ್ಮಾಡಿ ಅವರು ನಂತರ ೨೦೧೮ರಲ್ಲಿ ಆಫ್ರಿಕಾ ಖಂಡದ ಝಾಂಬಿಯಾದಲ್ಲಿ ಆಶ್ಕೋ ಸೈಮಂಡ್ ಲಿಮಿಟೆಡ್ ಕಂಪೆನಿಯನ್ನು ಸ್ಥಾಪಿಸಿ ಏಶ್ಯಾ ಖಂಡದ ಅತ್ಯುತ್ತಮ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ರಿ ಯುರೋಪ್ನ ಉಕ್ರೇನ್ ಹಾಗೂ ಕೊಲ್ಲಿ ರಾಷ್ಟ್ರವಾದ ಬಹರೈನ್ನಲ್ಲಿ ಕಚೇರಿಯನ್ನು ಹೊಂದಿದ್ದಾರೆ. ೨೦೧೮ರಲ್ಲಿ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ನ್ನು ಪಡೆದುಕೊಂಡಿದ್ದಾರೆ.