ಪುತ್ತೂರು: ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮ ನಡಾವಳಿಯ ಅಂಗವಾಗಿ ಎ.28ರಂದ ಬೆಳಿಗ್ಗೆ ದಂಡನಾಯಕ ದೈವದ ವಾಲಸರಿ, ನೇಮ ನಡೆಯಿತು.
ಮುಂಜಾನೆಯಿಂದಲೇ ಭಕ್ತರ ದೈವಸ್ಥಾನಕ್ಕೆ ಆಗಮಿಸಿ, ಉಳ್ಳಾಲ್ತಿಗೆ ಪ್ರಿಯವಾದ ಮಲ್ಲಿಗೆ ಹೂವು, ಕುಂಕುಮ, ಪಟ್ಟೆ ಸೀರೆ, ಎಳನೀರು ಅರ್ಪಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ನೇಮ ನಡಾವಳಿಯ ಪೂರ್ವಭಾವಿಯಾಗಿ ಎ.27ರಂದು ಮಧ್ಯಾಹ್ನ ಬಲ್ನಾಡು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ವಿಶೇಷ ಮಹಾಪೂಜೆ, ರಾತ್ರಿ ರಂಗಪೂಜೆ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ತಂಬಿಲ ಸೇವೆಗಳು ನಡೆಯಿತು.
ಎ.28ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಗಣಪತಿ ಹೋಮ ನಡೆದು ತಂತ್ರ ತೂಗಿದ ಬಳಿಕ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ಆರಂಭಗೊಂಡು ಕಿರುವಾಳು ಭಂಡಾರ ವಾಲಸರಿ ಗದ್ದೆಗೆ ತೆರಳಿ, ದಂಡನಾಯಕ ದೈವದ ಮುಖಾಮುಖಿ, ವಾಲಸರಿ ಗದ್ದೆಯಲ್ಲಿ ದೈವದ ನೇಮ ನಡೆಯಿತು.
ಉಚಿತ ವಾಹನ, ಉಪಾಹಾರ:
ಪುತ್ತೂರು ಪೇಟೆಯಿಂದ ಸುಮಾರು 3 ಕಿ,ಮೀನ ದೂರದಲ್ಲಿರುವ ಬಲ್ನಾಡು ದೈವಸ್ಥಾನದ ನೇಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಭಕ್ತರಿಗೆ ದೈವಸ್ಥಾನಕ್ಕೆ ತೆರಳಲು ಹಾಗೂ ಮತ್ತೆ ಹಿಂತಿರುಗಳು ಉಚಿತ ವಾಹನ ಸೌಲಭ್ಯಗಳು, ಅಲ್ಲಲ್ಲಿ ಮಜ್ಜಿಗೆ, ಕಲ್ಲಂಗಡಿ ಜ್ಯೂಸ್, ಪಾನಕ, ನೀರು ಮೊದಲಾದ ಪಾನೀಯ, ಉಪಾಹಾರದ ಸೌಲಭ್ಯಗಳು ನಡೆಯಿತು.