ಪುತ್ತೂರು: ವಿಶ್ವಾದ್ಯಂತ ಜನರು ನೃತ್ಯವೆಂಬ ಭಾಷೆಯ ಮೂಲಕ ಒಗ್ಗಟ್ಟಾಗಬೇಕೆಂಬ ಬಲವಾದ ಆಶಯದೊಂದಿಗೆ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದ್ದು ಎ.29 ರಂದು ಸಂಜೆ ಪುತ್ತೂರು ದರ್ಬೆಯಲ್ಲಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಶಶಿಶಂಕರ ಕಲಾವೇದಿಕೆಯಲ್ಲಿ ವಿಶ್ವ ನೃತ್ಯ ದಿನದ ನೃತ್ಯಾಂತರಂಗ ಕಾರ್ಯಕ್ರಮ ನಡೆಯಿತು.
ಫ್ರೆಂಚ್ನ ಪ್ರಸಿದ್ಧ ನೃತ್ಯಗಾರ, ಆಧುನಿಕ ಬ್ಯಾಲೆ ನೃತ್ಯದ ಸೃಷ್ಟಿಕರ್ತ ಜೀನ್ ಜಾರ್ಜಸ್ ನೊವೆರೆ ಅವರ ಜನ್ಮದಿನ. ಜೀನ್ ಅವರ ಗೌರವಾರ್ಥ ಪ್ರತಿವರ್ಷ ಏಪ್ರಿಲ್ 29 ರಂದು ನೃತ್ಯ ಸಂಭ್ರಮ ನಡೆಯುತ್ತಿದ್ದು, ಪುತ್ತೂರಿನಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಶಶಿಪ್ರಭಾ ಅವರ ಮಾರ್ಗದರ್ಶನದಲ್ಲಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗು ವಿದ್ವಾನ್ ಗಿರೀಶ್ ಕುಮಾರ್ ಅವರ ನೇತೃತ್ವದಲ್ಲಿ ಕಲಾ ಶಾಲೆಯ 45 ಮಂದಿ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ನೃತ್ಯಾಂತರಂಗ ನಡೆಯಿತು. ವಿದ್ಯಾರ್ಥಿನಿಯೊಬ್ಬರ ಪೋಷಕರಾದ ಜ್ಯೋತಿ ಬೊಳುವಾರು ಕಾರ್ಯಕ್ರಮ ಉದ್ಘಾಟಿಸಿದರು.
ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಅಭ್ಯಾಗತರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಮುಳಿಯ ಶ್ಯಾಮ ಭಟ್, ಶಿವಪ್ರಸಾದ್ ಕಜೆ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ನ್ಯಾಯವಾದಿ ಮಹೇಶ್ ಕಜೆ, ದೀಪಿಕಾ ಕಜೆ, ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು. ನೃತ್ಯ ಕಲಾಶಾಲೆಯ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ನೃತ್ಯ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ ಕಲೆಯ ಕುರಿತು ಪ್ರಶ್ನಾ ಕಾರ್ಯಕ್ರಮ ನಡೆಯಿತು.