ಪುತ್ತೂರು : ಬಪ್ಪಳಿಗೆ ರಾಗಿಕುಮೇರಿ ಶ್ರೀಮಾರಿಯಮ್ಮ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗು ವಾರ್ಷಿಕ ಮಾರಿ ಪೂಜೆ ಮೇ.೭ರಿಂದ ೧೧ರವರೆಗೆ ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ನಡೆಯಲಿದೆ.
ಮೇ.೭ರಂದು ಸಂಜೆ ಶ್ರೀಕ್ಷೇತ್ರಕ್ಕೆ ತಂತ್ರಿವರ್ಯರ ಆಗಮನ, ಆಲಯ ಪರಿಗ್ರಹ ಪ್ರಾರ್ಥನೆ, ಸ್ಥಳ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಬಿಂಬ ಶುದ್ಧಿ, ಬಿಂಬಾದಿವಾಸ ರಕ್ಷೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೭ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಬಪ್ಪಳಿಗೆ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ರವರು ಉದ್ಘಾಟಿಸಲಿದ್ದಾರೆ. ಶ್ರೀಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮೇ.೮ರಂದು ಬೆಳಿಗ್ಗೆ ೭ರಿಂದ ಪ್ರತಿಷ್ಠಾ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೭ರಿಂದ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಶ್ರೀಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ಉದ್ಯಮಿ ಕೋಡಿಂಬಾಡಿ ರೈ ಎಸ್ಟೇಟ್ನ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮೇ.೯ರಂದು ರಾತ್ರಿ ಶ್ರೀಸತ್ಯಸಾರಮಣಿ ಕುಲದೈವದ ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮೇ.೧೦ರಂದು ರಾತ್ರಿ ೮ರಿಂದ ಪೂಜಾದಿ ಕಾರ್ಯಗಳ ಆರಂಭ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ, ಚಾಮುಂಡಿ, ಶ್ರೀಸತ್ಯಸಾರಮಣಿ ಗುಳಿಗ ದೈವಗಳ ದರ್ಶನ, ಕಾಲೋನಿ ಸಂಚಾರ, ರಾತ್ರಿ ೧೦ರಿಂದ ಸಾರ್ವಜನಿಕ ಸಂತರ್ಪಣೆ, ೧೧.೩೦ಕ್ಕೆ ಅಗ್ನಿ ಸೇವೆ, ಅಮ್ಮನವರ ಭಂಡಾರ ಬಯಲು ಮಂಟಪಕ್ಕೆ ತೆರಳುವುದು, ಮಹಾಪೂಜೆ ನಡೆಯಲಿದೆ. ಮೇ.೧೧ರಂದು ಮಧ್ಯಾಹ್ನ ಮಹಾಪೂಜೆ, ಶ್ರೀಮಾರಿಯಮ್ಮ ಸಪರಿವಾರ ದೈವಗಳ ದರ್ಶನ, ಹರಕೆ, ಅಭಯ ಸ್ವೀಕಾರ, ನಂತರ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಅಮ್ಮನವರ ಭಂಡಾರ ಮರಳಿ ದೇವಸ್ಥಾನಕ್ಕೆ ತೆರಳುವುದು, ಮಹಾಮಂಗಳಾರತಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ : ಮೇ.7ರಂದು ರಾತ್ರಿ ೯ರಿಂದ ಬಪ್ಪಳಿಗೆ ನೆಲ್ಲಿಗುಂಡಿ ಬಿ.ಕೆ.ಸುಂದರ್ರವರ ಮನಿವಂಶಿ ಮ್ಯೂಸಿಕ್ನಿಂದ ಭಕ್ತಿ ರಸಮಂಜರಿ ನಡೆಯಲಿದೆ. ಮೇ.೮ರಂದು ಮಧ್ಯಾಹ್ನ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಕರ್ ಹೆಗ್ಡೆ ಪುತ್ತೂರು ನಿರ್ದೇಶನದ ಪುನೀತ್ ಆರ್ಕೆಸ್ಟ್ರಾ ರವರಿಂದ ಭಕ್ತಿ ಗಾನಸುಧಾ, ರಾತ್ರಿ ೯ರಿಂದ ವಿಠಲ ನಾಯಕ್ ಕಲ್ಲಡ್ಕ ರವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಇಂದು ಹೊರೆಕಾಣಿಕೆ ಸಮರ್ಪಣೆ
ಮೇ.7ರಂದು ಸಂಜೆ 3.ರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ರವರು ಮೆರವಣಿಗೆ ಉದ್ಘಾಟಿಸಲಿದ್ದಾರೆ.