- ಭಯಭೀತರಾದ ಜನತೆ, ಅರಣ್ಯ ಇಲಾಖೆಗೆ ಮಾಹಿತಿ
ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡು ಕೋಣ ಓಡಾಟ ನಡೆಸುತ್ತಿದ್ದು, ಜನ ಒಡಾಟ ನಡೆಸಲು ಭಯಪಡುವಂತಾಗಿದೆ.
ಮೂರು ದಿನಗಳ ಹಿಂದೆ ಸಬಳೂರು ಸಮೀಪದ ಪಟ್ಟೆದಮೂಲೆ ಎಂಬಲ್ಲಿ ರಾತ್ರಿ ವೇಳೆ ತೋಟದಲ್ಲಿ ಕಾಡುಕೋಣ ಕಂಡು ಬಂದಿತ್ತು. ಮನೆಯೊಂದರ ನಾಯಿ ಬೊಗಳಿದಾಗ ಅಟ್ಟಿಸಿಕೊಂಡು ಮನೆ ಸಮೀಪದ ತನಕ ಬಂದಿತ್ತು. ಅದಾದ ಬಳಿಕ ರಾತ್ರಿ ವೇಳೆ ರಸ್ತೆ ಸಂಚಾರಿಯೋರ್ವರಿಗೂ ಕಾಡು ಕೋಣ ಕಂಡು ಬಂದಿದೆ. ಮೇ 17ರಂದು ಸಾಯಂಕಾಲ ಕಾಡುಕೋಣ ಸಬಳೂರು ಶ್ರೀ ರಾಮ ಭಜನಾ ಮಂದಿರದ ಬಳಿ ರಸ್ತೆಯನ್ನು ದಾಟುತ್ತಿರುವುದನ್ನು ನೋಡಿದ ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಕಾಡುಕೋಣ ಇರುವಿಕೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.