- ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ – ಸತೀಶ್ ಕುಮಾರ್ ಕೆಡೆಂಜಿ
ಕಾಣಿಯೂರು: ಮಕ್ಕಳು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಆಗ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಬಹುದು, ಈ ಮೂಲಕ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ತತ್ವಾದರ್ಶವಾದ ಸಂಘಟನೆಯಿಂದ ಬಲಯುತರಾಗಿರಿ ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ ಎಂಬ ಸಾಮಾಜಿಕ ಪರಿವರ್ತನೆಯ ಸಿದ್ದಾಂತಕ್ಕೆ ನ್ಯಾಯ ಸಿಗಬಹುದು ಎಂದು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿಯವರು ಹೇಳಿದರು. ಅವರು ಕುದ್ಮಾರು ಬಿಲ್ಲವ ಗ್ರಾಮ ಸಮಿತಿಯ ವತಿಯಂದ ಬ್ರಹ್ಮ ಬೈದೆರುಗಳ ಗರಡಿ ಕೆಲಂಬೀರಿ ಇಲ್ಲಿ ನಡೆದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಭೆಯಲ್ಲಿ ಮಾತನಾಡಿದರು.
ನಾವು ಈ ದಿನ ನಮ್ಮ ಸಮಾಜದ ಮಕ್ಕಳ ಹಿತದೃಷ್ಟಿಯಿಂದ ತಾಲೂಕಿನ 51 ಗ್ರಾಮ ಸಮಿತಿಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 3 ಲಕ್ಷ ವಿದ್ಯಾರ್ಥಿ ವೇತನ ನೀಡುವುದು ಮಾತ್ರವಲ್ಲದೇ, ಪ್ರತಿ ಗ್ರಾಮ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ನೀಡುತ್ತಿದ್ದೇವೆ ಎಂದರು. ಈ ಬಾರಿ ಕುದ್ಮಾರು ಗ್ರಾಮ ಸಮಿತಿಯ ವತಿಯಿಂದ ಒಂದನೇ ತರಗತಿಯಿಂದ ಪದವಿವರೆಗಿನ ಒಟ್ಟು 138 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿರುತ್ತೇವೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮ ಬೈದೆರುಗಳ ಗರಡಿ ಕೆಲಂಬೀರಿ ಇದರ ಮಾಜಿ ಅಧ್ಯಕ್ಷರಾದ ಉಮೇಶ್ ಕೆ ಎನ್ ಕಾರ್ಲಾಡಿಯವರು ನೆರವೇರಿಸಿದರು. ವೇದಿಕೆಯಲ್ಲಿ ಪುತ್ತೂರು ಬಿಲ್ಲವ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಕೋಶಾಧಿಕಾರಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲು, ಬ್ರಹ್ಮ ಬೈದೆರುಗಳ ಗರಡಿ ಕೆಲಂಬೀರಿ ಇದರ ಆಡಳಿತ ಸಮಿತಿ ಅಧ್ಯಕ್ಷರಾದ ಬಿ. ಎ ವಸಂತ ಪೂಜಾರಿ, ಮೊಕ್ತೇಸರರಾದ ಬಾಬು ಪೂಜಾರಿ ಕೆಲಂಬೀರಿ, ಸದಸ್ಯರಾದ ಸತೀಶ್ ಮಾರ್ಕಾಜೆ, ಕುದ್ಮಾರು ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ದೋಳ, ಬಿಲ್ಲವ ಗ್ರಾಮ ಸಮಿತಿ ಕಾರ್ಯದರ್ಶಿ ಪ್ರವೀಣ್ ಬರೆಮೇಲು ಉಪಸ್ಥಿತರಿದ್ದರು. ಬಿಲ್ಲವ ಸಂಘ ಸವಣೂರು ವಲಯ ಸಂಚಾಲಕರಾದ ಸಂತೋಷ್ ಕುಮಾರ್ ಮರಕ್ಕಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಚಿನ್ ಸೌತೆಮಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.