ಪುತ್ತೂರು: ಬಡಗನ್ನೂರು ಗ್ರಾಮದ ಪಟ್ಟೆ ಎಂಬಲ್ಲಿರುವ ಪಾಳುಬಿದ್ದ ಕಿಂಡಿ ಅಣೆಕಟ್ಟನ್ನು ತೆರವುಗೊಳಿಸುವಂತೆ ದ.ಕ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪಟ್ಟೆಯಲ್ಲಿರುವ ಈ ಕಿಂಡಿ ಅಣೆಕಟ್ಟು ಅತ್ಯಂತ ಹಳೆಯದಾಗಿದ್ದು, ಉಪಯೋಗ ಶೂನ್ಯವಾಗಿತ್ತು. ಸುಮಾರು 50 ವರ್ಷಗಳ ಹಿಂದೆ ಕೃಷಿ ಬಳಕೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಾಣಮಾಡಲಾಗಿತ್ತು. ಸೂಕ್ತ ನಿರ್ವಾಹಣೆಯಿಲ್ಲದೆ ಅಣೆಕಟ್ಟು ಪಾಲುಬಿದ್ದಿತ್ತು. ಮಳೆಗಾಲದಲ್ಲಿ ತ್ಯಾಜ್ಯಗಳು ಅಣೆಕಟ್ಟು ಬಳಿ ರಾಶಿ ಬಿದ್ದು ಮಳೆ ನೀರು ಹರಿದು ಪಕ್ಕದ ರಸ್ತೆ ಮತ್ತು ಕೃಷಿ ತೋಟಗಳಿಗೆ ತೊಂದರೆಯಾಗುತಿತ್ತು. ಅಣೆಕಟ್ಟು ದುರಸ್ತಿ ಮಾಡಲು ಮತ್ತು ಹಲಗೆ ಜೋಡಿಸಲು ಇಲಾಖೆಯಿಂದ ಅನುದಾನ ನೀಡುತ್ತಿರಲಿಲ್ಲ. ಈ ಕಾರಣಕ್ಕೆ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
ಡಿ ಸಿ ಗೆ ಮನವಿ
ಇತ್ತೀಚೆಗೆ ಬಡಗನ್ನೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ಹೂಡಿದ್ದ ದ ಕ ಜಿಲ್ಲಾಧಿಕಾರಿಗಳಲ್ಲಿ ಕಿಂಡಿ ಅಣೆಕಟ್ಟನ್ನು ತೆರವುಮಾಡುವಂತೆ ಮನವಿ ಮಾಡಿದ್ದರು. ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳಿಂದ ಮಾಹಿತಿ ಪಡೆದು, ಕಿಂಡಿ ಅಣೆಕಟ್ಟನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ. ಕಿಂಡಿ ಅಣೆಕಟ್ಟಿ ತೆರವು ಮಾಡಿದರೆ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ಹರಿಯುವುದು ಮತ್ತು ಕೃಷಿ ತೋಟಗಳಿಗೆ ನುಗ್ಗುವುದನ್ನು ತಡೆಯಬಹುದಾಗಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದು ತೆರವಿಗೆ ಸೂಚನೆ ನೀಡುವ ಮೂಲಕ ಕೃಷಿಕರಿಗೆ ಪ್ರಯೋಜನವಾದಂತಾಗಿದೆ.