ಉಪ್ಪಿನಂಗಡಿ: ಕಾಲೇಜಿನ ಸಮವಸ್ತ್ರದ ನಿಯಮಾವಳಿಯನ್ನು ಉಲ್ಲಂಘಿಸಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಿ ವಿವಾದದ ಕೇಂದ್ರವಾಗಿದ್ದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದ್ದು, ಸಮವಸ್ತ್ರ ನಿಯಮ ಪಾಲನೆಯೊಂದಿಗೆ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿದ್ದಾರೆ. ನಿಯಮ ಉಲ್ಲಂಘನೆಯ ಕಾರಣಕ್ಕೆ ಕಳೆದ ಸೋಮವಾರದಂದು 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಬಳಿಕ ಉಳಿದ ವಿದ್ಯಾರ್ಥಿನಿಯರ ನಡವಳಿಕೆಯಲ್ಲಿ ಬದಲಾವಣೆ ಗೋಚರಿಸಿದ್ದು, ಹಿಜಾಬ್ ಬೇಡಿಕೆಯನ್ನು ಬದಿಗಿರಿಸಿ ಕಲಿಕಾ ವಾತಾವರಣಕ್ಕೆ ಆಸಕ್ತರಾಗಿದ್ದಾರೆ. ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದ ಕಾಣದ ಕೈಗಳ ಕೃತ್ಯವು ವಿದ್ಯಾರ್ಥಿನಿಯರ ಹೆತ್ತವರಿಗೆ ಅರಿವಾದೊಡನೆ ಈ ಬದಲಾವಣೆ ನಡೆದಿದೆ. ಇನ್ನೊಂದೆಡೆ ನೊಂದ ವಿದ್ಯಾರ್ಥಿನಿ ಎಂದು ಹೆಸರಿಸಿಕೊಂಡು ತಮ್ಮ ಹಿಜಾಬ್ ಬೇಡಿಕೆಗಾಗಿ ಮಾಡಿದ ಹೋರಾಟಕ್ಕೆ ಸಮಾಜದ ಮುಖಂಡರ ಬೆಂಬಲ ದೊರೆಯದಿರುವುದನ್ನು ದೇವರು ಕ್ಷಮಿಸನು ಎಂದು ಹತಾಶೆಯಿಂದ ಪ್ರತಿಪಾದಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ರವಾನಿಸಿರುವ ಬಗ್ಗೆಯೂ ವರದಿಯಾಗಿದೆ.