ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಮನೆಯೊಂದರಿಂದ ಕೇವಲ ಎರಡು ಗಂಟೆ ಅವಧಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವಾದ ಮತ್ತು ಮನೆಯಂಗಳದಲ್ಲಿಟ್ಟಿದ್ದ ಬೈಕ್ನ್ನೂ ಕೂಡಾ ಕಳವಾದ ಘಟನೆ ಜೂ.12ರಂದು ರಾತ್ರಿ ಬೆಳಕಿಗೆ ಬಂದಿದೆ.
ಆರ್ಯಾಪು ಗ್ರಾಮದ ಸಂಪ್ಯ ದಿ.ಬಾಪಕುಂಞಿ ಅವರ ಪುತ್ರ ಅದ್ರಾಮ ಎಸ್ ಅವರ ಮನೆಯಿಂದ ಕಳವಾಗಿದೆ. ಅವರು ಜೂ. 12ರಂದು ಸಂಜೆ ಕೊಡಾಜೆಯ ಜನಪ್ರಿಯ ಗಾರ್ಡನ್ ಮೆಹಂದಿ ಕಾರ್ಯಕ್ರಮಕ್ಕೆಂದು ಪತ್ನಿ ಮಮ್ತಾಜ್ ಜೊತೆ ಜೂ. 12ರ ಮುಸ್ಸಂಜೆ ಗಂಟೆ ೭.೧೫ಕ್ಕೆ ಆಟೋ ರಿಕ್ಷಾದಲ್ಲಿ ತೆರಳಿ ರಾತ್ರಿ ಗಂಟೆ 9.15ಕ್ಕೆ ಮನೆಗೆ ವಾಪಾಸಾದ ವೇಳೆ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಇದರ ಜೊತೆ ಮನೆಯಂಗಳದಲ್ಲಿಟ್ಟಿದ್ದ ಪಲ್ಸರ್ ಬೈಕ್ ಕೂಡಾ ಕಳವಾಗಿದೆ. ಕಳ್ಳರು ಮನೆಯ ಬಾಗಿಲಿನ ಒಳ ಭಾಗದ ಚಿಲಕವನ್ನು ಮುರಿದು ಮನೆಯ ಬೆಡ್ರೂಮ್ನ ಹಾಸಿಗೆಯೊಳಗಿದ್ದ ಕೀಯ ಮೂಲಕ ಕಬ್ಬಿಣದ ಕಪಾಟನ್ನು ತೆರದು ಚಿನ್ನದ ಬಳೆಗಳು, ನೆಕ್ಲೆಸ್, ಬೆಂಡೋಲೆ, ವಜ್ರದ ಉಂಗುರ ಸೇರಿದಂತೆ ರೂ. 6,74,600 ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಇದರ ಜೊತೆಗೆ ಮನೆಯ ಅಂಗಳದಲ್ಲಿ ಇಟ್ಟಿದ್ದ ರೂ. 12 ಸಾವಿರ ಮೌಲ್ಯದ ಕಪ್ಪು ಬಣ್ಣದ ಪಲ್ಸರ್ ಬೈಕ್ ಕೂಡಾ ಕಳವಾಗಿದೆ. ಘಟೆನೆಯ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.