ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್‌ಗೆ ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್

0

  •  ಜೂ.15ರಂದು ದುಬೈಯಲ್ಲಿ  ಪ್ರಶಸ್ತಿ ಪ್ರದಾನ

ಮಂಗಳೂರು:ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಲಖನೌ ನೀಡುವ ಇಂಟರ್‌ನ್ಯಾಷನಲ್ ವರ್ಲ್ಡ್ ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್‌ಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.

 


ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಈ ಬಾರಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗೈದ ಅಪೂರ್ವ ಸಾಧನೆಗಾಗಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಿದೆ.
ದುಬೈಯ ಭಾಯಿ ಅಜ್ಮಾನ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಜೂ.14,15ರಂದು ಮೈಲ್‌ಸ್ಟೋನ್ ಗ್ಲೋಬಲ್ ಕಾನ್‌ಕ್ಲೇವ್ ಇಂಟರ್ ನ್ಯಾಶನಲ್ ಸೆಮಿನಾರ್ ನಡೆಯಲಿದ್ದು ಜೂ.೧೪ರಂದು ನಡೆಯುವ ಇಂಟರ್ ನ್ಯಾಶನಲ್ ಸೆಮಿನಾರ್‌ನಲ್ಲಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರು `ಮಹಿಳಾ ಸಬಲೀಕರಣ’ ವಿಷಯದ ಬಗ್ಗೆ ಮಾತನಾಡಲಿದ್ದಾರೆ.ಸ್ವ ಸಹಾಯ ಸಂಘಗಳ ಮೂಲಕ ವಿಶೇಷವಾಗಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಮೂಲಕ ಗೈದ ಯಶೋಗಾಥೆಯ ಕುರಿತು ಅವರು ಸೆಮಿನಾರ್‌ನಲ್ಲಿ ಅವರು ವಿಚಾರ ಮಂಡಿಸಲಿದ್ದಾರೆ.

ಜೂ.೧೫ರಂದು ನಡೆಯಲಿರುವ ಸಮಾರಂಭದಲ್ಲಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ ಸ್ವೀಕರಿಸಲಿದ್ದಾರೆ. ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ ಜಾಗತಿಕ ಸಾಧಕರ ಗುರುತಿಸುವಿಕೆಯ ಪ್ರಶಸ್ತಿ ಆಗಿದೆ.ಪ್ರಪಂಚದಾದ್ಯಂತ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಕಾರ್ಪೊರೇಟ್ ವಲಯ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ನೆಟ್‌ವರ್ಕಿಂಗ್‌ನಿಂದ ಮೈಲ್‌ಸ್ಟೋನ್ ಗ್ಲೋಬಲ್ ಅಚೀವರ್ಸ್ ಫೋರಮ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿಕೊಂಡಿದೆ.ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಬೆಳೆಸಿದ ಹೆಗ್ಗಳಿಕೆ ಡಾ|ರಾಜೇಂದ್ರ ಕುಮಾರ್ ಅವರದ್ದು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಳೆದ ೨೮ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಗೈಯುತ್ತಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್‌ನ್ನು `ಜನಸ್ನೇಹಿ’ ಬ್ಯಾಂಕನ್ನಾಗಿ ರೂಪಿಸಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ಇವರು ತಂದುಕೊಟ್ಟಿದ್ದಾರೆ.

ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದು. ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು.

ತಿಂಗಳವಧಿಯಲ್ಲಿ ನಾಲ್ಕನೆಯ ಪ್ರಶಸ್ತಿ

ಕಳೆದ ಒಂದು ತಿಂಗಳ ಅವಧಿಯಲ್ಲಿ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಇದು ನಾಲ್ಕನೆಯ ಪ್ರಶಸ್ತಿ. ಭಾರತ ಸರಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೊಸದೆಹಲಿ ಇದರ ವತಿಯಿಂದ ಅಟಲ್ ಪಿಂಚಣಿ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಎಪಿವೈ ರಾಷ್ಟ್ರೀಯ ಪ್ರಶಸ್ತಿ, ಹೊಸದೆಹಲಿಯ ಇನ್ ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಸ್ಟಡೀಸ್ ವತಿಯಿಂದ ಔಟ್ ಸ್ಟ್ಯಾಂಡಿಂಗ್ ಲೀಡರ್‌ಶಿಪ್ ಅವಾರ್ಡ್, ಗ್ಲೋಬಲ್ ಲೀಡರ್ಸ್ ಫೌಂಡೇಶನ್ ಹೊಸದಿಲ್ಲಿ ಇದರ ವತಿಯಿಂದ ಮೋಸ್ಟ್ ಇನ್ನೋವೇಟೀವ್ ಬಿಸಿನೆಸ್ ಅವಾರ್ಡ್ ಡಾ|ರಾಜೇಂದ್ರ ಕುಮಾರ್ ಅವರಿಗೆ ಈಗಾಗಲೇ ಸಂದಿದೆ.

LEAVE A REPLY

Please enter your comment!
Please enter your name here