ಪುತ್ತೂರು: ಪುತ್ತೂರು ಸಿಟಿ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್, ಆರೋಗ್ಯ ಭಾರತಿ ಪುತ್ತೂರು ಜಿಲ್ಲೆ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗಾಗಿ ಉಚಿತ ಯೋಗ ಮತ್ತು ಆರೋಗ್ಯ ಮಾಹಿತಿ ಶಿಬಿರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜೂ.18ರಿಂದ 27 ರವರೆಗೆ ಸಂಜೆ 5 ರಿಂದ 6 ರವರೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಹಿರಿಯ ನಾಗರಿಕರಿಗೆ ಸರಳ ವ್ಯಾಯಾಮ, ಸರಳ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ, ಮುದ್ರೆಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುವ ಆರೋಗ್ಯಕರ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಉಪನ್ಯಾಸವನ್ನು ನೀಡಲಾಗುವುದು. ಹಿರಿಯ ನಾಗರಿಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯಿಡ್, ಹೃದ್ರೋಗ, ಗಂಟುನೋವುಗಳು, ಮೂಳೆ ಸವೆತ, ನಿದ್ರಾಹೀನತೆ, ಒತ್ತಡ, ದೃಷ್ಟಿ ಸಮಸ್ಯೆ ಮೊದಲಾದವುಗಳ ನಿಯಂತ್ರಣಕ್ಕೆ ಸಲಹೆ, ಸೂಚನೆಗಳನ್ನು ತಜ್ಞ ವೈದ್ಯರುಗಳು ನೀಡಲಿದ್ದಾರೆ. ಅಶಕ್ತರಿಗೆ ಕುರ್ಚಿಯಲ್ಲಿ ಕುಳಿತು ಸರಳ ಯೋಗಾಸನ, ಪ್ರಾಣಾಯಾಮ, ಧ್ಯಾನಗಳನ್ನು ಕಲಿಸುವ ವ್ಯವಸ್ಥೆ ಇದೆ. ಈ ಶಿಬಿರದಲ್ಲಿ ನೋಂದಾಯಿತರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ. ನೋಂದಾವಣೆಗಾಗಿ ೯೬೮೬೦೭೦೪೩೪, ೭೩೩೮೦೫೨೫೪೪ನ್ನು ಸಂರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.