ಪುತ್ತೂರು: ಸೊಮವಾರ ಪೇಟೆಯಿಂದ ಪುತ್ತೂರಿಗೆ ಬಂದು ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬ್ಯಾಟರಿ ಸಂಪರ್ಕ ವಯರಿಂಗ್ ದೋಷದಿಂದ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡ ಮತ್ತು ತಕ್ಷಣ ಬಸ್ ಅನ್ನು ನಿಲ್ಲಿಸಿದ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಜು.6ರಂದು ಪುತ್ತೂರು ಮುಖ್ಯರಸ್ತೆ ಮಯೂರ ಇನ್ಲ್ಯಾಂಡ್ ಸಂಕೀರ್ಣ ಬಳಿ ನಡೆದಿದೆ.
ಸೋಮವಾರಪೇಟೆಯಿಂದ ಪುತ್ತೂರಿಗೆ ಬಂದು ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಪುತ್ತೂರು ಮುಖ್ಯರಸ್ತೆ ಮಯೂರು ಇನ್ಲ್ಯಾಂಡ್ ಸಂಕೀರ್ಣ ಸಮೀಪ ತಲುಪುತ್ತಿದ್ದಂತೆ ಬಸ್ನ ಎಂಜಿನ್ ಭಾಗದಲ್ಲಿ ಸಣ್ಣಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಿಶೀಲಿಸುತ್ತಿರುವ ಎಂಜಿನ್ನ ಬಿಸಿಗೆ ಬ್ಯಾಟರಿ ಸಂಪರ್ಕದ ವಯರಿಂಗ್ ಮೆಲ್ಟ್ ಆಗಿ ಹೊಗೆ ಬಂದಿರುವುದು ಬೆಳಕಿಗೆ ಬಂದಿತ್ತು. ಪಕ್ಕದಲ್ಲಿರುವ ಟಾಟಾ ಕಂಪೆನಿಯ ಶೋ ರೂಮ್ನ ಮೆಕ್ಯಾನಿಕ್ ಬಂದು ವಯರಿಂಗ್ ದುರಸ್ಥಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಅಗ್ನಿಶಾಮಕದಳದವರೂ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಯಾವುದೇ ಬೆಂಕಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರು ಕಾರ್ಯಾಚರಣೆ ನಡೆಸುವ ಅಗತ್ಯವಿರಲಿಲ್ಲ ಎಂದು ಅಗ್ನಿಶಾಮಕದಳದ ಮುಖ್ಯ ಠಾಣಾಧಿಕಾರಿ ಸುಂದರ್ ಅವರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ:
ಬಸ್ನಲ್ಲಿ ಕಂಡು ಬಂದ ತಾಂತ್ರಿಕ ದೋಷದ ಹಿನ್ನೆಲೆಯಲಿ ಪ್ರಯಾಣಿಕರನ್ನು ಬದಲಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವರನ್ನು ಬದಲಿ ಬಸ್ನಲ್ಲಿ ಕಳುಹಿಸಿ ಕೊನೆಗೆ ದೋಷ ಕಂಡು ಬಂದ ಬಸ್ ಅನ್ನು ಪುತ್ತೂರು ಡಿಪೋಗೆ ಕೊಂಡೊಯ್ಯಲಾಗಿದೆ.