ನೆಲ್ಯಾಡಿ: ಕಳೆದ 10 ವರ್ಷಗಳಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ನಲ್ಲಿ ಕಾರ್ಯದರ್ಶಿಯಾಗಿದ್ದು ಇದೀಗ ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ಗೆ ವರ್ಗಾವಣೆಗೊಂಡಿರುವ ಸತೀಶ್ ಬಂಗೇರರವರಿಗೆ ಬೀಳ್ಕೊಡುಗೆ ಜು.7ರಂದು ಕೌಕ್ರಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ವನಿತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಲೋಕೇಶ್ ಬಾಣಜಾಲುರವರು ಮಾತನಾಡಿ, ಸತೀಶ್ ಬಂಗೇರರವರು ಉತ್ಸಾಹಿಯಾಗಿದ್ದು, ಯಾವುದೇ ಸಮಸ್ಯೆ ಇದ್ದರೂ ಸಮಾಧಾನದಿಂದ ಆಲಿಸಿ ಬಗೆಹರಿಸುತ್ತಿದ್ದರು. ಗ್ರಾಮಸ್ಥರಿಗೆ, ಪಂಚಾಯತ್ ಸದಸ್ಯರಿಗೆ ಉತ್ತಮ ರೀತಿಯ ಸ್ಪಂದನೆ ನೀಡುತ್ತಿದ್ದರು ಎಂದರು. ಸದಸ್ಯೆ ಡೈಸಿ ವರ್ಗೀಸ್, ಸಿಬ್ಬಂದಿ ಕಸ್ತೂರಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಸತೀಶ ಬಂಗೇರರವರು, ೨೦೧೨ರಲ್ಲಿ ಕಾರ್ಯದರ್ಶಿಯಾಗಿ ಕೌಕ್ರಾಡಿ ಗ್ರಾಮ ಪಂಚಾಯತ್ಗೆ ನೇಮಕಗೊಂಡಿದ್ದು ಇಲ್ಲಿ9 ವರ್ಷ ೧೦ ತಿಂಗಳು ಕರ್ತವ್ಯ ನಿರ್ವಹಿಸಿದ್ದೇನೆ. ಇದರೊಂದಿಗೆ ಕೌಕ್ರಾಡಿ, ಶಿರಾಡಿ, ಐತ್ತೂರು, ಎಡಮಂಗಲ ಗ್ರಾಮ ಪಂಚಾಯತ್ಗಳಲ್ಲಿ ಪ್ರಭಾರ ಪಿಡಿಒ ಆಗಿಯೂ ಕರ್ತವ್ಯ ನಿರ್ವಹಿಸಿದ್ದೇನೆ. ಕಡಬ ತಾ.ಪಂ.ನಲ್ಲಿ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ೩೪ನೇ ನೆಕ್ಕಿಲಾಡಿ ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದೇನೆ. ಕೌಕ್ರಾಡಿ ಗ್ರಾಮ ಪಂಚಾಯತ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳ ಸಹಕಾರಕ್ಕೆ ಚಿರಋಣಿಯಾಗಿರುವುದಾಗಿ ಹೇಳಿದರು. ಉಪಾಧ್ಯಕ್ಷೆ ಭವಾನಿ ಜಿ., ಸದಸ್ಯರಾದ ಉದಯಕುಮಾರ್, ಮಹೇಶ್ ಪಟ್ಲಡ್ಕ, ಕೆ.ಎಂ.ಹನೀಫ್, ರೋಯಿ ಯಾನೆ ಟಿ.ಎಂ.ಕುರಿಯಾಕೋಸ್, ಸುಧಾಕರ, ವಿಶ್ವನಾಥ ಗೌಡ, ಜನಾರ್ದನ, ದಿನೇಶ್, ಸವಿತಾ ಎಸ್., ಶೈಲಾ, ಪುಷ್ಪಾ, ದೇವಕಿ, ಸಿಬ್ಬಂದಿಗಳಾದ ಪುರಂದರ, ಮಂಜುಳಾ, ವಿದ್ಯಾ ಬಿ., ವಿದ್ಯಾಶ್ರೀ, ರೂಪಲತಾ, ಪ್ರೇಮ, ಗ್ರಂಥಾಲಯ ಮೇಲ್ವಿಚಾರಕಿ ವಿಮಲ ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಜಿ.ಎನ್.,ಸ್ವಾಗತಿಸಿದರು.
ಸನ್ಮಾನ:
ಸತೀಶ್ ಬಂಗೇರರವರಿಗೆ ಫಲತಾಂಬೂಲ, ಹಾರಾರ್ಪಣೆ, ಶಾಲು, ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿ ಗೌರವಯುತವಾಗಿ ಬೀಳ್ಕೊಡಲಾಯಿತು. ಸತೀಶ ಬಂಗೇರರವರು ಎಲ್ಲಾ ಸದಸ್ಯರಿಗೆ, ಸಿಬ್ಬಂದಿಗಳಿಗೆ ಶಾಲು ಹಾಕಿ ಕೃತಜ್ಞತೆ ಸಲ್ಲಿಸಿದರು.