ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಇದರ ವತಿಯಿಂದ ನಡೆಯುತ್ತಿರುವ ಯಂತ್ರಶ್ರೀ ಕಾರ್ಯಕ್ರಮದ ಮೂಲಕ ಹಡೀಲು ಬಿದ್ದ ಗದ್ದೆಯನ್ನು ಗುರುತಿಸಿ ಭತ್ತ ಬೇಸಾಯ ಮಾಡುವ ಮೂಲಕ ಪುನಶ್ಚೇತನ ನೀಡುವ ಯಂತ್ರಶ್ರೀ ಕಾರ್ಯಕ್ರಮ ಕೃಷಿಕರಿಗೆ ವರದಾನವಾಗಿದೆ.
ಕಾವು ಜಾತ್ರೋತ್ಸವದ ಸಂದರ್ಭದಲ್ಲಿ ಉಳ್ಳಾಕುಲು ಮುಡಿ ಇಡುವ ಗದ್ದೆ ಎಂದು ಕರೆಯುವ ಜಾಗ ಸುಮಾರು 25 ವರ್ಷಗಳಿಂದ ಹಡೀಲು ಬಿದ್ದಿತ್ತು. ಅದನ್ನು ಸ್ವಚ್ಚ ಗೊಳಿಸಿ ಅಂದಾಜು ಮೂರು ಎಕ್ರೆ ಗದ್ದೆಯಲ್ಲಿ ಯಂತ್ರದ ಮೂಲಕ ಜು.9 ರಂದು ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡತ್ತಾಯ ಇವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಈ ಕಾರ್ಯಕ್ರಮ ಕೃಷಿಗೆ ಪ್ರೇರಣೆ ನೀಡಿದೆ. ಅಲ್ಲದೆ ಅವರ ವಿವಿಧ ಸೇವೆಯನ್ನು ಗುರುತಿಸಿದ ಪ್ರಧಾನ ಮಂತ್ರಿಗಳು ರಾಜ್ಯಸಭೆಗೆ ಆರಿಸಿದ್ದು ಇವರ ಸೇವೆ ಇಡೀ ದೇಶಕ್ಕೆ ಸಿಕ್ಕಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿ ಶುಭ ಹಾರೈಸಿದರು. ನಂತರ ಅವರು ಯಂತ್ರದ ಮೂಲಕ ನಾಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ನನ್ಯ ಕುಟುಂಬದ ಹಿರಿಯರಾದ ವಾಸುದೇವ ಮೂಡತ್ತಾಯ,ಗದ್ದೆಯ ವಾರೀಸುದಾರರಾದ ಇಂದಿರಾ ಹಾಗೂ ವರುಣ್.ಎನ್, ಯಂತ್ರಶ್ರೀ ಯೋಧ ಮೋನಪ್ಪ ಪೂಜಾರಿ ಮತ್ತೀತರರು ಉಪಸ್ಥಿತರಿದ್ದರು.ತಾಲೂಕು ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.