ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಹೆದ್ದಾರಿ ಬದಿಯ ಬೃಹತ್ ಮರವೊಂದು ಗಾಳಿ ಮಳೆಗೆ ಕಾಂಕ್ರಿಟ್ ರಸ್ತೆಯ ಮೇಲೆ ಬಿದ್ದ ಘಟನೆ ಜು.14ರಂದು ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನ ಸುರಿದ ಭಾರೀ ಗಾಳಿ ಹಾಗೂ ಮಳೆಗೆ ಬೃಹತ್ ಮರವೊಂದು ಬುಡ ಸಮೇತ ಬಿದ್ದಿದೆ. ಇಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಮರದ ಬುಡದ ಮಣ್ಣು ತೆಗೆಯಲಾಗಿದ್ದು ಇದರಿಂದಾಗಿ ಮರಬಿದ್ದಿದೆ. ಇದರಿಂದಾಗಿ ಹೆದ್ದಾರಿಯ ಎರಡು ಬದಿ ವಾಹನಗಳ ಸಾಲುಗಟ್ಟಿ ನಿಂತಿದ್ದವು. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್, ಉಪಾಧ್ಯಕ್ಷ ಸನ್ನಿ ಜಾನ್ರವರು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ನಿರಂತರ ಓಡಾಟ ನಡೆಸುತ್ತಿದ್ದು ಮರ ಬೀಳುವ ಸಂದರ್ಭದಲ್ಲಿ ಯಾವುದೇ ವಾಹನ ಓಡಾಟ ಇಲ್ಲದೇ ಇದ್ದು ಸಂಭಾವ್ಯ ಅಪಾಯವೊಂದು ತಪ್ಪಿದೆ.