ಕಡಬ: ಬೆಳಕು ಯೋಜನೆಯಲ್ಲಿ ಅವ್ಯವಹಾರದ ಆರೋಪ ಹೊರಿಸಿ ನನ್ನ ಹೆಸರಿಗೆ ಮಸಿ ಬಲಿಯುವ ಉದ್ದೇಶದಿಂದ ತೇಜೋವಧೆ ಮಾಡಿರುವ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಉದ್ಯಮಿ ಎಲೆಕ್ಟ್ರಿಕಲ್ ಗುತ್ತಿಗೆದಾರರೂ ಆಗಿರುವ ಅಭಿಲಾಷ್ ಪಿ.ಕೆ ಹೇಳಿದರು.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನನ್ನ ಸಮಾಜಮುಖಿ ಕೆಲಸ ಹಾಗು ರಾಜಕೀಯ ಏಳಿಗೆಯನ್ನು ಸಹಿಸದ ಬಿಜೆಪಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನನ್ನ ಘನತೆ ಗೌರವಕ್ಕೆ ಧಕ್ಕೆ ತಂದಿದ್ದಾರೆ. ನನ್ನ ಮೇಲೆ ಹೊರಿಸಿರುವ ಆರೋಪವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಕಿಟ್ಗಳನ್ನು ವಿತರಿಸಿ ಸಮಾಜದ ಬಡ ಜನರ ಪರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಯತ್ತಾ ರಾಜ್ಯ ಸರಕಾರದ ಬೆಳಕು ಯೋಜನೆಯನ್ನು ಕಡಬ ಮೆಸ್ಕಾಂ ಉಪವಿಭಾಗದ 5 ಗ್ರಾಮಗಳಲ್ಲಿ ನಿರ್ವಹಿಸುತ್ತಿದ್ದು ಸುಮಾರು 80% ಫಲಾನುಭವಿಗಳಿಗೆ ಈಗಾಗಲೇ ವಿದ್ಯುತ್ ಕಾಮಗಾರಿಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರ್ವಹಿಸಿರುತ್ತೇನೆ. ಆದರೆ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ ಇಮ್ಯಾನುವೆಲ್, ಸದಸ್ಯ ಚಂದ್ರಶೇಖರ್ ಹಳೆನೂಜಿ, ಪ್ರಮುಖರಾದ ಜಯಂತ ಬರೇಮೇಲು, ಅನಿಲ್ ಕೆರ್ನಡ್ಕರವರುಗಳು ಕಡಬದಲ್ಲಿ ಪ್ರತ್ರಿಕಾಗೋಷ್ಠಿಯಲ್ಲಿ, ನಾನು ಬೆಳಕು ಯೋಜನೆ ಫಲಾನುಭವಿಗಳಿಂದ ಬಲಾತ್ಕಾರವಾಗಿ ಹಣವನ್ನು ವಸೂಲಿ ಮಾಡಿರುವುದಾಗಿ ಯಾವುದೇ ಆಧಾರ ರಹಿತ ಆರೋಪ ಮಾಡಿರುತ್ತಾರೆ. ಆದರೆ ಇದು ಶುದ್ಧ ಸುಳ್ಳು, ನಾನು ಬೆಳಕು ಯೋಜನೆ ಫಲಾನುಭವಿಗಳಿಂದ ನಯಾಪೈಸೆ ಪ್ರತಿಫಲ ಪಡೆದಿದ್ದರೆ ಆ ಸಾಕ್ಷಿಯನ್ನು ಸಾರ್ವಜನಿಕರ ಮುಂದಿಟ್ಟು ನನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ಹೇಳಿದರು. ನನ್ನ ಬಗ್ಗೆ ಯಾವುದೇ ದೂರುಗಳಿಲ್ಲದಿದ್ದರೂ ಸಾಮಾನ್ಯ ಸಭೆಯಲ್ಲಿ ರಾಜಕೀಯ ದ್ವೇಷದಿಂದ ನನ್ನ ಮೇಲೆ ಹಣ ಪಡೆದ ಆರೋಪ ಹೊರಿಸಿ ನಿರ್ಣಯನ್ನು ತೆಗೆದುಕೊಂಡಿರುತ್ತಾರೆ. ಬಳಿಕ ವ್ಯಕ್ತಿಯೊಬ್ಬರಿಂದ ಬಲತ್ಕಾರವಾಗಿ ದೂರು ಪಡೆದಿದ್ದಾರೆ. ಆ ವ್ಯಕ್ತಿ ಬೆಳಕು ಯೋಜನೆಯ ಫಲಾನುಭವಿ ಪಟ್ಟಿಯಲ್ಲಿದ್ದರೂ ಮೆಸ್ಕಾಂ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ವೇಳೆಯಲ್ಲಿ ಇವರು ತಮಗೆ ಬೆಳಕು ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಬೇಡ ಎಂದಿರುವ ಹಿನ್ನೆಯಲ್ಲಿ ಬೆಳಕು ಯೋಜನೆಯನ್ನು ಕೈಬಿಟ್ಟು ಸಾಮಾನ್ಯ ಸಂಪರ್ಕ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಮಾಡಿಕೊಡಲು ಅನುಮತಿ ನೀಡಿ ಮನೆಯ ವಯರಿಂಗ್ ಕಾರ್ಯಕ್ಕಾ ಗಿ ಮುಂಗಡವಾಗಿ ರೂ 21,000 ರೂ. ನೀಡಿರುತ್ತಾರೆ. ನಾನು ವೈಯರಿಂಗ್ ಕಾಮಾಗಾರಿಗೆ ನನ್ನ ಕಾರ್ಮಿಕರೊಂದಿಗೆ ತೆರಳುವ ಸಂದರ್ಭದಲ್ಲಿ ಸುಮಿತ್ರಾ ಎಂಬವರು ತನ್ನ ಮನೆಗೆ ಬೇರೆ ಯಾವುದೋ ಜನರಿಂದ ವೈಯರಿಂಗ್ ಕಾಮಗಾರಿಯನ್ನು ನಿವಹಿಸಿದ್ದು ಕಾನೂನು ಪ್ರಕಾರ ಬೇರೊಬ್ಬರು ಮಾಡಿರುವ ಕಾಮಗಾರಿಗೆ ನಾನು ಇಲಾಖೆಯ ಸಮಾಪನಾ ವರದಿಯನ್ನು ನೀಡುವ ಹಾಗಿಲ್ಲ. ಆದುದರಿಂದ ಈ ವೈಯರಿಂಗ್ ಕಾಮಗಾರಿಗೆ ನಾನು ಆಕ್ಷೇಪಣೆಯನ್ನು ಮಾಡಿರುವುದರಿಂದ ಅವರು ನನ್ನ ಮೇಲೆ ಈ ರೀತಿಯ ಆರೋಪವನ್ನು ಸದಸ್ಯ ಚಂದ್ರಶೇಖರ್ ಹಳೆನೂಜಿರವರ ಸಲಹೆಯ ಮೇರೆಗೆ ನಿರ್ಣಯದ ಬಳಿಕ ಲಿಖಿತ ದೂರನ್ನು ಪಡೆದು ಕೊಂಡಿರುತ್ತಾರೆ. ಹಾಗೂ ಅಧ್ಯಕ್ಷರು ಮತ್ತು ಇವರ ಸಂಗಡಿಗರು ರಾಜಕೀಯ ದ್ವೇಷಕ್ಕೆ ಫಲಾನುಭವಿಯನ್ನು ಬಲಿಪಶು ಮಾಡಿರುತ್ತಾರೆ ಎಂದು ಆರೋಪಿಸಿದರು.
ನಾನು ಪಂಚಾಯಿತಿ ರಸ್ತೆಯಾದ ಬದಿಬಾಗಿಲು-ಒರುಂಬಾಲು- ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರೊಂದಿಗೆ ಸೇರಿ ಧ್ವನಿ ಎತ್ತಿದಾಗ ನನ್ನ ಧ್ವನಿಯ ಹುಟ್ಟಡಗಿಸಲು ಕೆಟ್ಟ ರಾಜಕೀಯ ನೀತಿಯನ್ನು ಅನುಸರಿಸಿದ್ದಾರೆ. ಸುಳ್ಳು ಆರೋಪ ಹೊರಿಸಿ ಇಂಧನ ಸಚಿವರಿಗೆ ದೂರು ನೀಡಿದ್ದಾರೆ. ಇದು ಅವರ ಸರ್ವಾಧಿಕಾರಿ ಧೋರಣೆಯಾಗಿದೆ. ನಾನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪಿ.ಡಿ.ಒ ಮತ್ತು ಅಧ್ಯಕ್ಷರ ಬಗ್ಗೆ ಜಾತಿನಿಂದನೆಯನ್ನು ಮಾಡಿರುವುದಿಲ್ಲ. ಇಲ್ಲಿ ಕಾರ್ಯದರ್ಶಿಯವರು ಪ್ರಭಾರ ಪಿಡಿಒ ಆಗಿರುತ್ತಾರೆ. ಅವರಿಗೆ ಕೆಲಸ ಗೊತ್ತಿಲ್ಲ. ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಅದನು ಪ್ರಶ್ನಿಸಿರುವುದಕ್ಕೆ ನನ್ನ ಮೇಲೆ ಜಾತಿ ನಿಂದನೆ ಆರೋಪ ಹೊರಿಸಿದ್ದಾರೆ, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಜಾತಿ ನಿಂದನೆ ಮಾಡಿದಕ್ಕೆ ಸಾಕ್ಷಿಯಿದ್ದರೆ ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ ಅಭಿಲಾಷ್ರವರು ಸಾರ್ವಜನಿಕವಾಗಿ ನನ್ನ ಘನತೆ ಗೌರವಕ್ಕೆ ನನ್ನ ಉದ್ಯೋಗಕ್ಕೆ ಹಾಗೂ ನನ್ನ ಸಾರ್ವಜನಿಕ ಜೀವನಕ್ಕೆ ತುಂಬಾ ನಷ್ಟವನ್ನು ಉಂಟುಮಾಡಿರುವ ವ್ಯಕ್ತಿಗಳ ಮೇಲೆ ನಾನು ಕಾನೂನು ರೀತಿಯ ಹೋರಾಟವನ್ನು ಮಾಡುತ್ತೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಸದಸ್ಯ ವಸಂತ ಕುಬಲಾಡಿ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ಮೇಲಿನ ಮನೆ. ಕಾಂಗ್ರೆಸ್ ಮುಖಂಡರಾದ ಶರೀಫ್ ಎ.ಎಸ್. ಜಗದೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.