ಯಶಸ್ವಿನಿ ಯೋಜನೆ ಮರು ಜಾರಿ: ಅಕ್ಟೋಬರ್ 2ರಂದು ಸಿಎಂ, ಅಮಿತ್ ಶಾ ಚಾಲನೆ-ಸುಬ್ರಹ್ಮಣ್ಯದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ

0

  • ಹೈನುಗಾರರಿಗಾಗಿ ಕ್ಷೀರ ಸಮೃದ್ಧಿ ಬ್ಯಾಂಕ್
  • ಬೆಳೆಸಾಲ:ಕೃಷಿ ಇಲಾಖೆ ಪ್ರಸ್ತಾವನೆ ಬೆನ್ನಲ್ಲೇ ಹಣ ಬಿಡುಗಡೆ
  • ಅತಿವೃಷ್ಟಿಯಿಂದಾದ ಹಾನಿಗೆ ತಕ್ಷಣ ಪರಿಹಾರ

 

ಸುಬ್ರಹ್ಮಣ್ಯ:ಹಲವು ಸಹಕಾರಿಗಳು ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವಂತೆ ಬೇಡಿಕೆ ಸಲ್ಲಿಸಿರುವ ಹಿನ್ನಲೆಯಲ್ಲಿ ಮುಂಬರುವ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಯಶಸ್ವಿನಿ ಯೋಜನೆಯನ್ನು ಮರು ಜಾರಿಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.


ಅವರು ಜು.23ರಂದು ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಕಳೆದ ಮೂರು ವರ್ಷಗಳಿಂದ ಯಶಸ್ವಿನಿ ಜಾರಿ ಮಾಡಿರಲಿಲ್ಲ.ಜಾರಿ ಮಾಡಬೇಕು ಎಂಬುದಾಗಿ ರೈತರ ಮತ್ತು ಸಹಕಾರಿಗಳ ಒತ್ತಾಸೆ ಇತ್ತು.ಹಾಗಾಗಿ ಅಕ್ಟೋಬರ್‌ನಿಂದ ರಾಜ್ಯಾದ್ಯಂತ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲಾಗುವುದು.ಅ.2ರಂದು ಗಾಂಧಿ ಜಯಂತಿಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಕೇಂದ್ರ ಗೃಹ, ಸಹಕಾರ ಸಚಿವರಾಗಿರುವ ಅಮಿತ್ ಷಾ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.ಯಶಸ್ವಿನಿಗೆ ಅ.೨ರ ನಂತರ ಸದಸ್ಯರಾಗಬಹುದು.ಈ ಹಿಂದೆ ಸದಸ್ಯರಾಗಿದ್ದವರು ಕೂಡಾ ಮತ್ತೆ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಸಚಿವ ಸೋಮಶೇಖರ್ ಹೇಳಿದರು.

ಹೈನುಗಾರರಿಗಾಗಿ ಕ್ಷೀರ ಸಮೃದ್ಧಿ ಬ್ಯಾಂಕ್: ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸುತ್ತಿದೆ.ಈಗಾಗಲೇ ೨೬ ಲಕ್ಷ ರೈತರು ಹಾಲನ್ನು ಹಾಕುತ್ತಿದ್ದಾರೆ.ಅವರಿಗೆ ಪ್ರತ್ಯೇಕವಾಗಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ತೆರೆಯಲಾಗುವುದು.ಈಗಾಗಲೇ ಕೇಂದ್ರ ಸಚಿವ ಅಮಿತ್ ಷಾ ಅವರು ಕ್ಷೀರ ಸಮೃದ್ಧಿ ಬ್ಯಾಂಕ್ ಲೋಕಾರ್ಪಣೆ ಮಾಡಿದ್ದಾರೆ.ರಿಸರ್ವ್ ಬ್ಯಾಂಕ್‌ನಿಂದಲೂ ಅನುಮತಿ ಪಡೆಯಲಾಗಿದೆ. ಮುಖ್ಯಮಂತ್ರಿಗಳ ಕನಸಿನ ಕೂಸಾದ ಈ ಬ್ಯಾಂಕ್ ಸಹಕಾರ ಕ್ಷೇತ್ರದ ಬ್ಯಾಂಕ್ ಆಗಿ ಜನತೆಗೆ ಸಹಕಾರ ನೀಡಲಿದೆ.ನಬಾರ್ಡ್‌ನಿಂದ ಇದಕ್ಕೆ ಬೇಕಾದ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಲಾಗುವುದು.ಇದನ್ನೂ ಅಕ್ಟೋಬರ್‌ನಲ್ಲಿ ಆರಂಭಿಸಲಾಗುವುದು ಎಂದು ಸಚಿವ ಸೋಮಶೇಖರ್ ಹೇಳಿದರು.

ಬೆಳೆಸಾಲ:ಕೃಷಿ ಇಲಾಖೆ ಪ್ರಸ್ತಾವನೆ ಬೆನ್ನಲ್ಲೇ ಹಣ ಬಿಡುಗಡೆ: ಬೆಳೆಸಾಲ ನೀಡಲು ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಹಣ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು.ಅತಿವೃಷ್ಠಿಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಮತ್ತು ಮನೆ ಇತ್ಯಾದಿಗಳು ಹಾನಿಗೊಳಗಾದ ಕೃಷಿಕರಿಗೆ ತಕ್ಷಣ ಪರಿಹಾರ ವಿತರಿಸಲಾಗುತ್ತಿದೆ.ರೂ.೫ ಲಕ್ಷ, ೩ ಲಕ್ಷ, ೧ ಲಕ್ಷ ಹಾಗೂ ೫೦ ಸಾವಿರದ ತನಕ ಜಿಲ್ಲಾಧಿಕಾರಿಗಳ ವರದಿಯನ್ನು ಆಧರಿಸಿ ತಕ್ಷಣ ಪರಿಹಾರ ವಿತರಿಸಲಾಗುತ್ತದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು.ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಮಾಜಿ ಸದಸ್ಯ ಕಿಶೋರ್ ಶಿರಾಡಿ, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಠಾಚಾರ ವಿಭಾಗದ ಹರೀಶ್ ಉಪಸ್ಥಿತರಿದ್ದರು.

ಕುಕ್ಕೆಶ್ರೀ ದೇವಳದಲ್ಲಿ ಸಚಿವರಿಂದ ಆಶ್ಲೇಷ ಬಲಿ ಸೇವೆ: ಕುಕ್ಕೆ ಶ್ರಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಶ್ಲೇಷ ಬಲಿ ಸೇವೆ ನೆರವೇರಿಸಿದರು.ಬಳಿಕ ಶ್ರೀ ದೇವರ ದರುಶನ ಪಡೆದ ಸಚಿವರಿಗೆ ದೇವಳದ ಅರ್ಚಕರಾದ ಸತ್ಯನಾರಾಯಣ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು.ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ಮೃತ್ತಿಕಾ ಪ್ರಸಾದ ಪಡೆದರು.ದೇವಳದಲ್ಲಿ ಉಪಹಾರ ಸ್ವೀಕರಿಸಿದರು.ದೇವಳದ ಆಡಳಿತ ಕಚೇರಿಗೆ ಆಗಮಿಸಿದ ಸಚಿವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು.ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ|ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಮಾಜಿ ಸದಸ್ಯ ಕಿಶೋರ್ ಶಿರಾಡಿ, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಟಾಚಾರ ವಿಭಾಗದ ಹರೀಶ್ ಉಪಸ್ಥಿತರಿದ್ದರು.ಜು.೨೨ರಂದು ರಾತ್ರಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಸಚಿವರು ಪ್ರಸಾದ ಭೋಜನ ಸ್ವೀಕರಿಸಿದರು.ಶನಿವಾರ ಶ್ರೀ ದೇವರ ದರುಶನ ಪಡೆದರು.

LEAVE A REPLY

Please enter your comment!
Please enter your name here