ನೆಲ್ಯಾಡಿ: ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕರ ಪದಗ್ರಹಣ ಹಾಗೂ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಜು.23ರಂದು ಬೆಥನಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಶಾಲಾ ನಾಯಕರು ಪ್ರಾಂಶುಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇತರೇ ಶಾಲಾ ಸಚಿವರು ಶಾಲಾ ಪ್ರಧಾನ ಮಂತ್ರಿಯಿಂದ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಶಾಲಾ ಸಚಿವ ಸಂಪುಟದ ಸದಸ್ಯರಿಗೆ ಅಧಿಕಾರ ಚಿಹ್ನೆಯಾದ ಶಾಲು ಹಾಗೂ ಬ್ಯಾಡ್ಜ್ ಅನ್ನು ಶಾಲಾ ಮುಖ್ಯಸ್ಥರಾದ ರೆ.ಫಾ.ತೋಮಸ್ ಬಿಜಿಲಿ ಒಐಸಿಯವರು ನೀಡಿದರು. ಶಾಲಾ ಬ್ಯಾಂಡ್ನೊಂದಿಗೆ ಪದಗ್ರಹಣ ಸಮಾರಂಭ ವರ್ಣರಂಜಿತವಾಗಿ ನಡೆಯಿತು.
೨೦೨೨-೨೩ನೇ ಸಾಲಿನ ಶಾಲಾ ಸಚಿವ ಸಂಪುಟದ ಪ್ರಧಾನ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ರೋಯೆಲ್, ಗೃಹಮಂತ್ರಿಯಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಜೀನಾ, ಶಿಕ್ಷಣ ಮಂತ್ರಿಯಾಗಿ ಸೋನಾ ಫ್ರಾನ್ಸಿಸ್ರವರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಜ್ವಲ್ ಜೋಸೆಫ್, ಬೆರಿಲ್, ಅಜೇಶ್, ಶ್ರೇಯಾ, ಏಂಜೆಲ್ರವರು ವಿವಿಧ ಖಾತೆಗಳ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ಅತಿಥಿಯಾಗಿದ್ದ ಧರ್ಮಸ್ಥಳ ರುಡ್ಸೆಟ್ ಸಂಸ್ಥೆಯ ಶಿಕ್ಷಕ ಅಬ್ರಹಾಂ ಜೇಮ್ಸ್ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಬೆಳೆಯಬೇಕು. ನಮ್ಮಲ್ಲಿರುವ ಪ್ರತಿಭೆಯನ್ನು ಅಡಗಿಸಬಾರದು. ಪ್ರದರ್ಶಿಸಬೇಕು. ಪ್ರತಿಯೊಂದು ಮಗುವು ದೇಶದ ಅಮೂಲ್ಯ ಸಂಪತ್ತು. ಪ್ರತಿಯೊಬ್ಬರು ನಾಯಕತ್ವವನ್ನು ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರ ಮುಕ್ತ ಸಮಾಜವನ್ನು ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆಯ ಪ್ರಾಂಶುಪಾಲ ರೆ.ಫಾ.ತೋಮಸ್ ಬಿಜಿಲಿ ಒಐಸಿ, ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ., ಸುಶೀಲ್ಕುಮಾರ್, ಜಾರ್ಜ್ ಕೆ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೋಸ್ ಎಂ.ಜೆ.,ಸ್ವಾಗತಿಸಿ, ಜೀನಾ ವಂದಿಸಿದರು. ಶಿಕ್ಷಕಿ ಮಂಜು ಪಿಲಿಪ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾ ಕಾರಂಜಿ ಸಮಾರೋಪ:
ಎರಡು ದಿನ ನಡೆದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಮಾರ್ ಇವಾನಿಯೋಸ್ ವೇದಿಕೆಯಲ್ಲಿ ನಡೆಯಿತು. ವಿವಿಧ ವೇದಿಕೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಚಟುವಟಿಕೆಗಳು ಶಿಕ್ಷಕರ ಸಹಕಾರದಿಂದ ನೆರವೇರಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಒಐಸಿಯವರು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ., ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನ್ಮರಿಯ ಕಾರ್ಯಕ್ರಮ ನಿರೂಪಿಸಿದರು.