ಪುತ್ತೂರು: ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸರಕಾರದ ಮುಖ್ಯ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಭಾರತೀಯ ಅಂಚೆ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸ್ವಾತಂತ್ರ್ಯದ ಸಂದರ್ಭದಲ್ಲಿ ಅಖಂಡ ಭಾರತ “ವಿಭಜನೆಯ ಕರಾಳ ನೆನಪಿನ ದಿನ”ವನ್ನು ಆ.12ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ 96 ವರ್ಷದ ಹಿರಿಯ ನಾಗರಿಕರಿಗ ಬಿ. ಎಸ್. ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಅವರು ಮಾತನಾಡಿ ಯುವಜನತೆಯು ರಾಮರಾಜ್ಯದ ಮೌಲ್ಯವನ್ನರಿತು ಗರಿಷ್ಠ ಪ್ರಮಾಣದ ಕೊಡುಗೆಯನ್ನು ಭಾರತಕ್ಕೆ ನೀಡಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ. ಏಂಜಲ್ ರಾಜ್ರವರು ಮಾತನಾಡಿ ಭಾರತದ ವಿಭಜನೆಯ ಸಂದರ್ಭದಲ್ಲಿ ನಾಗರಿಕರು ಅನುಭವಿಸಿದ ನೋವನ್ನು ನೆನಪಿಸುತ್ತಾ, ಕರಾಳ ವಿಭಜನೆಯ ಕಷ್ಟವನ್ನು ಭವಿಷ್ಯದಲ್ಲಿ ಭಾರತೀಯ ಪ್ರಜೆಗಳು ಅನುಭವಿಸದಿರಲಿ ಎಂದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಪಾಲಕ ತೀರ್ಥಪ್ರಸಾದ್ ಎಸ್, ಪುತ್ತೂರು ವಿಭಾಗದ ಸ್ಥಾನೀಯ ಸಹಾಯಕ ಅಂಚೆ ಅಧೀಕ್ಷಕ ಮೋಹನ ಬಿ, ಪುತ್ತೂರು ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಎ. ಜಿ. ಮರಡಿ ಯವರು ಉಪಸ್ಥಿತರಿದ್ದರು. ಜಗನ್ನಾಥ್ ಎಂ, ಸ್ವಾಗತಿಸಿದರು, ವಾಣಿ ಬೇಕಲ್ ವಂದಿಸಿದರು. ರೋಹನ್ ಲೂಯೀಸ್ ಎ ಕಾರ್ಯಕ್ರಮ ನಿರೂಪಿಸಿದರು.