![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಅಕ್ಷರ ದಾಸೋಹ ನೌಕರರು ಕಳೆದ 20 ವರ್ಷಗಳಿಂದ ಊರಶಾಲೆಯ ಕಲಿಯುವ ಮಕ್ಕಳಿಗೆ ಬಿಸಿಯೂಟ ತಯಾರಿಸಿ, ಬಡಿಸುತ್ತಾ ಕೆಲಸ ಮಾಡುತ್ತಿದ್ದರು. ಇವರ ಸೇವೆಗೆ ತಕ್ಕ ಸಂಬಳವಂತೂ ಇಲ್ಲವಾದರೂ ಸರಕಾರ ನಿಗದಿಪಡಿಸಿದ ಮಾಸಿಕ ರೂ 3,500 ಸಂಬಳವನ್ನು ಕಳೆದ 3 ತಿಂಗಳಿಂದ ನೀಡದೆ ಸತಾಯಿಸುತ್ತಿರುವುದು ಖಂಡನೀಯ. ಅದೇ ರೀತಿ ಹತ್ತಿಪ್ಪತ್ತು ವರ್ಷದಿಂದ ದುಡಿಸಿ 60 ವರ್ಷ ಪ್ರಾಯ ಆಗಿದೆ ಎಂಬ ಕಾರಣದಿಂದ ಕೆಲಸದಿಂದ ಕೈಬಿಟ್ಟ ಸರಕಾರ ಅವರಿಗೆ ಕನಿಷ್ಟ ಪರಿಹಾರವನ್ನೂ ನೀಡದಿರುವುದು ಕೂಡಾ ಬೇಸರದ ಸಂಗತಿ. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.
ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಮ್ ಭಟ್, ಅಕ್ಷರ ದಾಸೋಹ ಪುತ್ತೂರು ತಾಲೂಕು ಅಧ್ಯಕ್ಷ ಸುಧಾ, ಕಾರ್ಯದರ್ಶಿ ರಂಜಿತಾ, ವೇದಾ ಕೊಳ್ತಿಗೆ, ಕಡಬ ತಾಲೂಕಿನ ಅಧ್ಯಕ್ಷೆ ರೇವತಿ ಕಡಬ , ಕಾರ್ಮಿಕ ಮುಖಂಡ ಮಂಜುನಾಥ, ಕಾರ್ಮಿಕ ಮುಖಂಡೆ ನೆಬಿಸ, ನ್ಯಾಯವಾದಿ ಪಿ ಕೆ ಸತೀಶನ್ ಮತ್ತಿತರರು ಉಪಸ್ಥಿತರಿದ್ದರು.