ಉಪ್ಪಿನಂಗಡಿ: ನಿಲ್ಲಿಸಿದ ಹಿಟಾಚಿಯೊಂದರಲ್ಲಿದ್ದ ಮೂರು ಬ್ಯಾಟರಿ, ಡಿಸೇಲ್, ಟೂಲ್ಸ್ ಸೆಟ್ ಸಹಿತ ಸುಮಾರು 62,500 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಘಟನೆ ಮುಗೇರಡ್ಕ ದೈವಸ್ಥಾನದ ಬಳಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಾಥ್ ಶೆಟ್ಟಿ ಎಂಬವರಿಗೆ ಸೇರಿದ ಹಿಟಾಚಿಯು ಕಳೆದ ಎಪ್ರಿಲ್ ತಿಂಗಳಲ್ಲಿ ಮುಗೇರಡ್ಕ ದೈವಸ್ಥಾನದ ಬಳಿ ಕೆಲಸ ಮಾಡುತ್ತಿತ್ತು. ಬಳಿಕ ವಿಪರೀತ ಮಳೆಯಿಂದಾಗಿ ಕೆಲಸವಿಲ್ಲದಿದ್ದುದರಿಂದ ಜೂನ್ ತಿಂಗಳಲ್ಲಿ ಹಿಟಾಚಿಯನ್ನು ಅಲ್ಲೇ ನಿಲ್ಲಿಸಿ ಹೋಗಲಾಗಿತ್ತು. ಮಳೆ ಕಡಿಮೆಯಾದಾಗ ನಿಲ್ಲಿಸಿದ್ದ ಹಿಟಾಚಿಯನ್ನು ನೋಡಿದಾಗ ಹಿಟಾಚಿಗೆ ಅಳವಡಿಸಿದ್ದ ಎರಡು ಬ್ಯಾಟರಿ ಹಾಗೂ ಹಿಟಾಚಿಯೊಳಗೆ ಇದ್ದ ಒಂದು ಬ್ಯಾಟರಿ ಸೇರಿ ಮೂರು ಬ್ಯಾಟರಿಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಒಳಗಡೆ ಕ್ಯಾನ್ನಲ್ಲಿಟ್ಟಿದ್ದ 400ಲೀ. ಡೀಸೆಲ್, ಹಿಟಾಚಿಯ ಸ್ಪಾನರ್ ಸೆಟ್, ಆಯಿಲ್ ಕೂಡಾ ಕಳವು ಮಾಡಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.