ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ನ ಪುತ್ತೂರು ವಲಯದಿಂದ ಆ.೨೦ರಂದು ನಡೆದ ವಿಶ್ವ ಛಾಯಾಗ್ರಾಹಕ ದಿನವನ್ನು ರಕ್ತದಾನ ಶಿಬಿರ ಹಾಗೂ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಆಚರಿಸಿದರು.
ಇಲ್ಲಿನ ತಾಜ್ ಮಹಲ್ ಹೋಟೆಲ್ನಲ್ಲಿ ಕಳೆದ ಹಲವು ವರ್ಷಗಳಿಂದ ಸಪ್ಲಾಯರ್ ಕೆಲಸ ಮಾಡುತ್ತಿರುವ ದಯಾನಂದ ನಾಯಕ್ ಸನ್ಮಾನ ಸ್ವೀಕರಿಸಿದ ವಿಶಿಷ್ಟ ಪ್ರತಿಭೆ. ಹುಟ್ಟಿನಲ್ಲಿಯೇ ಮೂಗ, ಕಿವುಡನಾಗಿರುವುದರ ಜೊತೆಗೆ ಶಾಲಾ ಮೆಟ್ಟಿಲು ಹತ್ತದೇ, ವಿದ್ಯಾಭ್ಯಾಸದಿಂದ ವಂಚಿತವಾಗಿರುವ ಈ ದಯಾನಂದ ಎಲ್ಲಾ ಕಚೇರಿ, ಅಂಗಡಿಗಳನ್ನು ಗುರುತಿಸಬಲ್ಲ ಶಕ್ತಿಯಿದೆ. ಹೊಟೇಲ್ನಿಂದ ವಿವಿಧ ಅಂಗಡಿ ಹಾಗೂ ಕಚೇರಿಗಳಿಗೆ ಕಳುಹಿಸಿಕೊಡುವ ಉಪಾಹಾರಗಳನ್ನು ತಪ್ಪದೇ ಎಲ್ಲಿಗೆ ಕಳುಹಿಸುತ್ತಾರೋ ಅಲ್ಲಿಗೆ ತಪುಪಿಸುವುದಲ್ಲದೇ ಲೆಕ್ಕಾಚಾರಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬಲ್ಲ ವಿಶಿಷ್ಟ ಪ್ರತಿಭೆ. ಎಲ್ಲರಿಗೂ ಚಿರಪರಿಚಿತವಾಗಿರುವ ದಯಾನಂದನ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ `ಅನ್ನ ಸೇವಕ’ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಜೊತೆಗೆ ಪುತ್ತೂರು ವಲಯದ ಹಿರಿಯ ಛಾಯಾಗ್ರಾಹಕ ಶಶಿ ಸ್ಟುಡಿಯೋದ ಶಶಿಧರರವರನ್ನು `ಛಾಯಾ ಸೌರಭ-೨೦೨೨’ ಪುರಸ್ಕಾರ ನೀಡಿ ಗೌರವಿಸಿದರು.
ರಕ್ತದಾನ ಶಿಬಿರ;
ಛಾಯ ಗ್ರಾಹಕ ದಿನದ ಅಂಗವಾಗಿ ಪ್ರತಿ ವರ್ಷ ದಂತೆ ಈ ವರ್ಷವೂ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡಿದ್ದು, ಅಸೋಸಿಯೇಷನ್ ಸುಮಾರು ೩೦ ಮಂದಿ ಸದಸ್ಯರು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಮಾತನಾಡಿ, ರಕ್ತದಾನವು ಉಳಿದೆಲ್ಲಾ ದಾನಗಳಿಗಿಂತ ಮುಖ್ಯವಾದುದು. ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸುವಲ್ಲಿ ರಕ್ತದಾನವು ಮಹತ್ವವಾಗಿದ್ದು, ಮನುಷ್ಯರಿಗೆ ಅಗತ್ಯವಿರುವ ರಕ್ತವನ್ನು ಇನ್ನೊಬ್ಬ ಮನುಷ್ಯರೇ ನೀಡಬೇಕು ಹಿರತು ಅದಕ್ಕೆ ಪರ್ಯಾಯ ವಿಧಾನಗಳಿಲ್ಲ ಎಂದು ಹೇಳಿ ರಕ್ತದಾನದ ಮಹ್ವಗಳ ಬಗ್ಗೆ ವಿವರಿಸಿದರು.
ಎಸ್ಕೆಪಿಎ ಸೇವಾ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ ರಾವ್, ಎಸೋಸಿಯೇಶನ್ನ ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಸಂದರ್ಭೋಚಿತವಾಗಿ ಮಾತನಾಡಿದರು. ವಲಯದ ಅಧ್ಯಕ್ಷ ನಾಗೇಶ್ ಟಿ.ಎಸ್ ಕೆಮ್ಮಾಯಿ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗಿರಿಧರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಹರೀಶ್ ಎಲಿಯ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಂತ ಕುಮಾರ್ ಪ್ರಾರ್ಥಿಸಿದರು. ನಿಕಟಪೂರ್ವ ಕಾರ್ಯದರ್ಶಿ ಜಯಂತ ಗೌಡ ಕರ್ಕುಂಜ ಹಾಗೂ ಗೌರವಾಧ್ಯಕ್ಷ ಹರೀಶ್ ಪುಣಚ ಸನ್ಮಾನಿತರ ಪರಿಚಯ ಮಾಡಿದರು. ಗಣೇಶ್ ಕಟ್ಟಪುಣಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು ೩೦ ಮಂದಿ ರಕ್ತದಾನ ಮಾಡಿದರು.