ಪೆರಿಯಡ್ಕ: 25ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಚಾಲನೆ

0

ಉಪ್ಪಿನಂಗಡಿ: ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್‌ನ ವತಿಯಿಂದ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಈ ಬಾರಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅದ್ದೂರಿಯ ಚಾಲನೆ ದೊರೆತಿದ್ದು, ಬೆಳಗ್ಗೆ ಮುಕುಂದ ಮುರಳಿ ಭಟ್ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠಾಪನೆ ನಡೆಯಿತು.
ಬಳಿಕ ಗಣಪತಿ ಹವನ, ಶ್ರೀ ದೇವರಿಗೆ ಕಲ್ಪೋಕ್ತ ಪೂಜೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ರಿಂದ 5ರವರೆಗೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಸದಸ್ಯರಿಂದ ಭಜನಾ ಸೇವೆ, ಸಂಜೆ 6:30ರಿಂದ ಶ್ರೀ ದೇವರಿಗೆ ಕಲ್ಪೋಕ್ತ ಪೂಜೆ, ರಂಗಪೂಜೆ ನಡೆದು, ರಾತ್ರಿ 7:30ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8ಕ್ಕೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಹಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಭಾಗವಹಿಸಲಿದ್ದಾರೆ. ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9ರಿಂದ ಲಯನ್ ಕಿಶೋರ್ ಡಿ. ಶೆಟ್ರ ಕೂಟದ ಕಲಾವಿದರಿಂದ ‘ಕಟೀಲ್ದಪ್ಪೆ ಉಳ್ಳಾಲ್ದಿ’ ಅದ್ದೂರಿ ತುಳು ಪೌರಣಿಕ ನಾಟಕ ನಡೆಯಲಿದೆ.

ಸೆ.1ರಂದು ಬೆಳಗ್ಗೆ ಗಂಟೆ 8:30ಕ್ಕೆ ಪುಣ್ಯಾಹವಾಚನ, ಮಹಾಸಂಕಲ್ಪ, ಕಲಶ ಸ್ಥಾಪನೆ, ಅಷ್ಟೋತ್ತರ ನಾರಿಕೇಳ (108 ಕಾಯಿ)ಅಷ್ಟದ್ರವ್ಯ ಮಹಾಗಣಪತಿ ಹವನ ನಡೆಯಲಿದೆ. ಮಧ್ಯಾಹ್ನ ಗಂಟೆ 12.00ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಎರಡು ದಿನಗಳ ಕಾಲ ಪೂಜೆಗೊಳ್ಳುವ ಶ್ರೀ ಗಣಪತಿ ದೇವರನ್ನು ಸಂಜೆ 4 ಕ್ಕೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಿಂದ ಶೋಭಾಯಾತ್ರೆಯ ಮೂಲಕ ಕರೆದೊಯ್ದು ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಗುತ್ತದೆ.

ಆ.30ರಂದು ಸಂಜೆ ಶ್ರೀ ದೇವರ ಮೂರ್ತಿಯು ಉಪ್ಪಿನಂಗಡಿಗೆ ಆಗಮಿಸಿದ್ದು, ಬಳಿಕ ಮೆರವಣಿಗೆ ಮೂಲಕ ಭಜನಾ ಮಂದಿರಕ್ಕೆ ತರಲಾಯಿತು. ಇಲ್ಲಿನ ನೇತ್ರಾವತಿ ಸೇತುವೆಯ ಬಳಿ ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭ ಭಜನಾ ಮಂದಿರದ ಅಧ್ಯಕ್ಷ ಸುರೇಶ್ ಗೌಂಡತ್ತಿಗೆ, ಕಾರ್ಯದರ್ಶಿ ಅವನೀಶ್, ಪ್ರಮುಖರಾದ ಶಂಕರನಾರಾಯಣ ಭಟ್, ಪ್ರಸನ್ನ ಕುಮಾರ್, ಪ್ರತಾಪ್ ಪೆರಿಯಡ್ಕ, ಸದಾನಂದ ಶೆಟ್ಟಿ ಕಿಂಡೋವು, ಜಗದೀಶ್ ರಾವ್ ಮಣಿಕ್ಕಳ, ವಸಂತ ನಾಯ್ಕ, ಪ್ರಶಾಂತ್ ಪೆರಿಯಡ್ಕ, ಜತ್ತಪ್ಪ ನಾಯ್ಕ, ಗಣೇಶ್ ಆಚಾರ್ಯ, ಶೀನಪ್ಪ ಗೌಡ, ವಸಂತ ಕುಂಟಿನಿ, ಶಿವರಾಜ್ ಭಟ್ ಕುಂಟಿನಿ, ಹರೀಶ್ ಪಟ್ಲ, ಪ್ರವೀಣ್ ರೈ, ಪ್ರವೀಣ್ ಕುಮಾರ್, ರೋಹಿತ್, ಅಶೋಕ್ ವರ್ನಡ್ಕ, ಸದಾಶಿವ, ಸುಧಾಕರ ಕನಿಯ, ಸತೀಶ್ ಕನಿಯ, ದುರ್ಗಾಪ್ರಸಾದ್, ಗಣೇಶ್ ಕಿಂಡೋವು, ರಾಧಾಕೃಷ್ಣ ಭಟ್ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here