ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ

0

  • ಶಾಖೆಗಳು ಬೆಳೆದಂತೆ ಬೇರುಗಳು ಸದೃಢವಾಗುತ್ತದೆ: ಒಡಿಯೂರು ಶ್ರೀ
  • 375.80ಕೋಟಿ ವ್ಯವಹಾರ
  • 2.58ಕೋಟಿ ನಿವ್ವಳ ಲಾಭ
  • ಶೇ.15 ಡಿವಿಡೆಂಟ್

ವಿಟ್ಲ: ಸಮಾಜದ ಅಭಿವೃದ್ಧಿ ಜೊತೆಗೆ ಜನರ ವಿಕಾಸ ಸಹಕಾರಿಯಿಂದ ಆಗುತ್ತಿದೆ. ಶಾಖೆಗಳು ಬೆಳೆದಂತೆ ಬೇರುಗಳು ಸದೃಢವಾಗುತ್ತದೆ. ವ್ಯಕ್ತಿಗಿಂತ ಸಂಘಟನೆ ದೊಡ್ಡದೆನ್ನುವ ಮೂಲ ಮಂತ್ರದೊಂದಿಗೆ ಸಹಕಾರಿಯ ಬೆಳವಣಿಗೆ ಆಗುತ್ತಿದೆ. ಸಹಕಾರ ತತ್ವ ಬದುಕಿನಲ್ಲಿ ಬಹುಮುಖ್ಯವಾದುದು. ಸಂಘಟನೆಯಲ್ಲಿ ಎಚ್ಚರದಿಂದಿರುವ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಸೆ.16ರಂದು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2021-22ನೇ ಸಾಲಿನ 11ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಂಘಟನೆಯ ಬೆಳವಣಿಗೆಯಲ್ಲಿ ಹಲವರ ಸಹಕಾರವಿದೆ. ಬದುಕಿನಲ್ಲಿ ಸೌಹಾರ್ದತೆ ಹಾಗೂ ಸಹಕಾರ ಬದುಕಿನ ಎರಡು ಕಣ್ಣುಗಳು. ಅರ್ಥವ್ಯವಸ್ಥೆಯ ಜೊತೆಗೆ ಧರ್ಮ ಅಗತ್ಯ.

ತ್ಯಾಗ ಸೇವೆ ಬದುಕಿಗೆ ಅಗತ್ಯ. ಸಹಕಾರಿ ಸಂಘದ ಉದ್ದೇಶ ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವುದು. ಪಾರದರ್ಶಕ ವ್ಯವಹಾರದಲ್ಲಿ ತೃಪ್ತಿ‌ ಹೆಚ್ಚು. ಸಹಕಾರಿಗೆ ಗ್ರಾಹಕರೇ ಜೀವಾಳ. ನಮ್ಮದೆನ್ನುವ ಭಾವನೆ ಬಂದರೆ ಅಭಿವೃದ್ಧಿ ಹೆಚ್ಚು. ಸಮಾಜದ ಏಳಿಗೆಗಾಗಿ ಸಹಕಾರಿಯ ತ್ಯಾಗ ಬಹಳಷ್ಠಿದೆ. ಸಮಾಜದ ಸಬಲೀಕರಣ ಸಹಕಾರಿ ಪಾತ್ರ ಬಹುದೊಡ್ಡದಿದೆ. ಎಚ್ಚರದ ಬದುಕು ನಮ್ಮದಾಗಬೇಕು ಎಂದರು.

ಅಧ್ಯಕ್ಷ ಎ. ಸುರೇಶ್ ರೈ ಮಾತನಾಡಿ ಸಂಘ ೧೭ಶಾಖೆಗಳ ಮೂಲಕ ೩೭೫.೮೦ಕೋಟಿ ವ್ಯವಹಾರ ನಡೆಸಿ, ೨.೫೮ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ ರೈತರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ಸಹಕಾರಿಯ ಪಾರದರ್ಶಕ ವ್ಯವಹಾರವನ್ನು ಸದಸ್ಯರ ಮುಂದೆ ತೆರೆದಿಟ್ಟಿದೆ. ಶೇ.೧೫ ಡಿವಿಡೆಂಟ್ ಅನ್ನು ನೀಡಲಾಗುವುದು ಎಂದು ತಿಳಿಸಿದರು.

ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಹಕಾರಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಸಿಬ್ಬಂದಿಯವರನ್ನು ಗೌರವಿಸಲಾಯಿತು.

ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಸಿ. ಎ. ಬಾಲಸುಬ್ರಹ್ಮಣ್ಯ ಎನ್., ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಶಾರದಮಣಿ, ಸರಿತಾ ಅಶೋಕ್, ಯು. ದೇವಪ್ಪ ನಾಯಕ್ ಉಪ್ಪಳಿಗೆ, ಮೋನಪ್ಪ ಪೂಜಾರಿ ಕೆರೆಮನೆ ಕಾವು, ಸೋಮಪ್ಪ ನೈಕ್ ಕಡಬ, ಗಣೇಶ್ ಅತ್ತಾವರ, ಭವಾನಿಶಂಕರ್ ಶೆಟ್ಟಿ, ಅಕೋಕ್ ಕುಮಾರ್ ಯು.ಎಸ್., ವೃತ್ತಿಪರ ನಿರ್ದೇಶಕ ಎಂ. ಉಗ್ಗಪ್ಪ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿವಾಚಿಸಿದರು. ನಿರ್ದೇಶಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಪವಿತ್ರ ಎನ್. ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here