ಆಲಂಕಾರು; ರಾಮಕುಂಜ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಆಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.2ರಂದು ಉದ್ಘಾಟನೆಗೊಂಡಿತು.

ಉದ್ಘಾಟನಾ ಸಮಾರಂಭವು ಭಾರತಿ ಶಾಲೆಯ ಅಯೋಧ್ಯಾ ಸಭಾಂಗಣದಲ್ಲಿ ನಡೆಯಿತು. ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಆಚಾರ್ಯರವರು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆಯನ್ನು ಮೂಡಿಸುತ್ತದೆ. ಯಾವಾಗ ಒಬ್ಬ ವ್ಯಕ್ತಿ ಸಣ್ಣ ಪ್ರಾಯದಲ್ಲೇ ಇಂಥಹ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾನೋ, ಆಗ ಅದು ಆತನ ಮುಂದಿನ ಜೀವನದಲ್ಲೂ ಪ್ರಭಾವವನ್ನು ಬೀರುತ್ತದೆ. ಈ ರೀತಿಯ ಮೌಲ್ಯಗಳನ್ನು ಕಲಿಸುವ ಈ ಶಿಬಿರವು ಯಶಸ್ವಿಯಾಗಲಿ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಭಾದ ನಿರ್ದೇಶಕ ಕೃಷ್ಣ ಶೆಟ್ಟಿಯವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾಜಸೇವೆ, ವ್ಯಕ್ತಿತ್ವ ನಿರ್ಮಾಣದಂತಹ ವಿಷಯಗಳಿಗೆ ಆದ್ಯತೆಯನ್ನು ನೀಡುತ್ತದೆ. ಒಬ್ಬ ಸ್ವಯಂ ಸೇವಕನು ಇಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ಅದಲ್ಲದೆ ಮುಂದೆ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಎನ್.ಎಸ್.ಎಸ್ ಸ್ವಯಂ ಸೇವಕ ಏರುತ್ತಾನೆ ಮತ್ತು ಯಶಸ್ವಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ ಎಂಬುದಕ್ಕೆ ಹಲವು ಸಾಕ್ಷಿಗಳನ್ನು ನಾವು ನೀಡಬಹುದು. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಶ್ರಮದಾನದ ಮೂಲಕ, ಸಮಾಜದೊಂದಿಗೆ ಬೆರೆಯುವ ಮೂಲಕ, ವಿಚಾರ ಗೋಷ್ಠಿಗಳ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ನಿರಂತರ ಸಾಗುವಂತಾಗಲಿ ಎಂದು ಹೇಳಿದರು. ಶ್ರೀ ಭಾರತಿ ಹಿ.ಪ್ರಾ.ಶಾಲೆಯ ಗೌರವಾಧ್ಯಕ್ಷ ಕೃಷ್ಣ ಕುಮಾರ್ ಅತ್ರಿಜಾಲು, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ಪ್ರಶಾಂತ್ ರೈ ಮನವಳಿಕೆಯವರು ಶಿಬಿರಕ್ಕೆ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಬಿರದ ನಿರ್ದೇಶಕರಾದ ಚಂದ್ರಶೇಖರ ಕೆ.ಯವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ನನಗಲ್ಲ, ನಿಮಗೆ ಎಂಬ ಧೇಯವಾಕ್ಯವನ್ನಿಟ್ಟುಕೊಂಡು ಮುನ್ನಡೆಯುವ ಸಂಸ್ಥೆ. ಯಾರೆಲ್ಲಾ ಈ ಎನ್.ಎಸ್.ಎಸ್ ನೊಂದಿಗೆ ಜೋಡಿಸಿಕೊಂಡಿದ್ದಾರೋ, ಅಂಥವರ ವ್ಯಕ್ತಿತ್ವದಲ್ಲಿ ಮಹತ್ತರವಾದ ಬೆಳವಣೆಗೆ ಆಗುತ್ತದೆ. ಈ ಬೆಳವಣಿಗೆಯ ಪ್ರಕಟ ಈ ಕ್ಷಣದಲ್ಲಿ ಆಗದಿದ್ದರೂ, ಮುಂದಿನ ಜೀವನದಲ್ಲಿ ನಿಖರವಾಗಿಯೂ ವ್ಯಕ್ತಿತ್ವದಲ್ಲಿ ಆಗಲಿದೆ. ಹಾಗಾಗಿ ಈ ಶಿಬಿರದ ಸದ್ಬಳಕೆ ಮಾಡಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಸರ್ವ ರೀತಿಯಲ್ಲಿ ಉನ್ನತೀಕರಿಸಿಕೊಳ್ಳಬೇಕು ಎಂದು ಹೇಳಿದರು. ಶಿಬಿರ ನಾಯಕ ಶರತ್‌ಚಂದ್ರ, ನಾಯಕಿ ಮೇಘ, ಶಿಬಿರಾಧಿಕಾರಿ ತಿಲಕಾಕ್ಷ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಮೀಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು. ಶಿಬಿರಾಧಿಕಾರಿ ತಿಲಕಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿ ಅನನ್ಯಾ ವಂದಿಸಿದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here