“ಹನಿಟ್ರ್ಯಾಪ್”? ಮರ್ದಾಳದ ವ್ಯಕ್ತಿಗಳ ಬಲೆಗೆ ಬಿದ್ದ ಮಂಗಳೂರಿನ ಯುವಕ! : ಹಣಕ್ಕಾಗಿ ಬೇಡಿಕೆ ಶಂಕೆ? : ಸಿನಿಮೀಯ ರೀತಿಯಲ್ಲಿ ಓರ್ವ ಆರೋಪಿಯನ್ನು ಬೆನ್ನತ್ತಿ ಹಿಡಿದ ಕಡಬ ಪೋಲಿಸರು !

0

ಕಡಬ: ಮಂಗಳೂರು ಭಾಗದ ಯುವಕನೋರ್ವ ಕಡಬ ಸಮೀಪದ ಮರ್ದಾಳದ ಯುವಕರ ತಂಡದಿಂದ ಹನಿಟ್ರಾಪ್ ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕಡಬ ಪೋಲಿಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡ ಘಟನೆ ಅ.5ರಂದು ಸಂಜೆ ನಡೆದಿದೆ.
ಈ ಘಟನೆಯ ಬಗ್ಗೆ ಪೋಲಿಸರಿಂದ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಮಂಗಳೂರು ಸಮೀಪದ ಯುವಕನೋರ್ವ ಅ.4ರ ತಡರಾತ್ರಿ ಮರ್ದಾಳಕ್ಕೆ ಬಂದಿದ್ದು , ಆ ಯುವಕನನ್ನು ಮರ್ದಾಳದ ಯುವಕರ ತಂಡವೊಂದು ಕರ್ಮಾಯಿ ಕೋರಿಯಾರ್ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿ ಹಣ ನೀಡದಿದ್ದರೆ ಹುಡುಗಿಯ ವಿಚಾರದಲ್ಲಿ ನಿನ್ನ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಒಡ್ಡಿ ಹಣ ತರುವಂತೆ ಹೇಳಿ ಬಿಟ್ಟಿದ್ದರು ಎನ್ನಲಾಗಿದೆ. ಅ.5 ರಂದು ಕಡಬದಲ್ಲಿ ದ್ದ ಮಂಗಳೂರಿನ ಯುವಕ ತನ್ನ ಸ್ನೇಹಿತರೋರ್ವರ ಮೂಲಕ ಕಡಬ ಪೋಲಿಸರನ್ನು ಭೇಟಿಯಾಗಿ ಮಾಹಿತಿ ನೀಡಿದ್ದ.. ಬಳಿಕ ಕಾರ್ಯಪ್ರವೃತ್ತರಾದ ಕಡಬ ಪೋಲಿಸರು ಸಂತ್ರಸ್ತನ ಮೂಲಕ, ಆರೋಪಿಗಳಿಗೆ ಹಣ ನೀಡುವುದಾಗಿ ಹೇಳಿ ಕಡಬಕ್ಕೆ ಬರಲು ತಿಳಿಸಿದ್ದರು. ಅದರಂತೆ ಮೂವರು ಆರೋಪಿಗಳು ಬಂದಿದ್ದರು. ಆರೋಪಿಗಳು ಎರಡು ಪ್ರತ್ಯೇಕ ವಾಹನದಲ್ಲಿ ಇದ್ದು, ಇಬ್ಬರು ದೂರದಿಂದಲೇ ಪೋಲಿಸರು ಬರುವ ಮಾಹಿತಿ ಅರಿತು ಪರಾರಿಯಾಗಿದ್ದಾರೆ.ಇನ್ನೋರ್ವ ಆರೋಪಿ ಕೂಡ ಪೋಲಿಸರನ್ನು ಕಂಡ ಕೂಡಲೇ ಕಡಬದಿಂದ ದ್ವಿಚಕ್ರ ವಾಹನದಲ್ಲಿ ವೇಗವಾಗಿ ನೂಜಿಬಾಳ್ತಿಲ ರಸ್ತೆಯ ಮೂಲಕ ಹೋಗಿದ್ದಾನೆ, ಆತನನ್ನು ಬೆನ್ನಟ್ಟಿದ್ದ ಕಡಬ ಪೋಲಿಸರು ರೆಂಜಿಲಾಡಿ ಗ್ರಾಮದ ಪೇರಡ್ಕ ಸಮೀಪ ವಶಕ್ಕೆ ತೆಗೆದುಕೊಂಡಿದ್ದಾರೆ. ಮರ್ದಾಳದ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಂಡಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಪೋಲಿಸರ ತನಿಖೆಯ ಬಳಿಕವಷ್ಟೆ ತಿಳಿದುಬರಲಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭಿಸಬೇಕಿದೆ.

LEAVE A REPLY

Please enter your comment!
Please enter your name here