ಫೆ.4: ಪುತ್ತೂರು ರೋಟರಿ ವತಿಯಿಂದ ಶಾಸಕರೊಂದಿಗೆ “ರೋಟರಿ ಜನತಾ ಅದಾಲತ್”

0

ಮತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಈವರೆಗೆ ಆಗಿರುವ ಮುಂದಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಶಾಸಕ ಸಂಜೀವ ಮಠಂದೂರು ಅವರೊಂದಿಗೆ ’ರೋಟರಿ ಜನತಾ ಅದಾಲತ್’ ಕಾರ್ಯಕ್ರಮ ಫೆ. 4ರಂದು ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕರದೊಂದಿಗೆ ಪ್ರಶ್ನಾವಳಿಗಾಗಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಕೊಡುವಂತೆ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


1965 ರಲ್ಲಿ ಪ್ರಾರಂಭಗೊಂಡ ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆ ಮತ್ತೂರು ರೋಟರಿ ಕ್ಲಬ್ ಪುತ್ತೂರಿನ ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಹುಟ್ಟಿ ಬೆಳೆದು ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ. 1998ರಲ್ಲಿ ಆಗಿನ ರೋಟರಿ ಅಧ್ಯಕ್ಷ ಗಣಪತಿ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಆಗಿನ ಶಾಸಕ ವಿನಯ ಕುಮಾರ್ ಸೊರಕೆ, ಹಿಂದೆ ಸಂಸದರಾಗಿದ್ದ ಧನಂಜಯ ಕುಮಾರ್ ಅವರೊಂದಿಗೂ ಕೂಡಾ ಅದಾಲತ್ ಮಾಡುವ ಮೂಲಕ ಪುತ್ತೂರಿನ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಲಾಗಿತ್ತು. ಇದೀಗ ಈಗಿನ ಶಾಸಕರಾಗಿರುವ ಸಂಜೀವ ಮಠಂದೂರು ಅವರ ಜೊತೆ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಕೋರ್ಟ್ ಮಾದರಿಯಲ್ಲಿದ್ದು, ಸಂಜೆ ಗಂಟೆ 5 ರಿಂದ 7 ಗಂಟೆಯ ತನಕ ನಡೆಯಲಿದೆ. ಈಗಾಗಲೇ ಸುಮಾರು 35ಕ್ಕೂ ಅಧಿಕ ಲಿಖಿತ ಪ್ರಶ್ನೆಗಳು ಬಂದಿವೆ. ಅದನ್ನು ಕ್ರೋಢೀಕರಿಸಿ ಜೇಸಿಐಯ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಅವರು ಅದಾಲತ್ ನಿರ್ವಹಣೆ ಮಾಡಲಿದ್ದಾರೆ. ಹಿರಿಯ ನ್ಯಾಯವಾದಿ ರಾಮ ಮೋಹನ್ ರಾವ್ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ವೃತ್ತಿ ಸೇವಾ ನಿರ್ದೇಶಕರಾಗಿರುವ ವಾಮನ್ ಪೈ ಅವರು ಮಾತನಾಡಿ ರೋಟರಿ ಸಂಸ್ಥೆ ಪುತ್ತೂರಿನ ಪರಿಸರದಲ್ಲಿ ಹತ್ತು ಹಲವು ಶಾಶ್ವತ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಮಹಾವೀರ ಆಸತ್ರೆಯಲ್ಲಿ ಡಯಾಲಿಸಿಸ್ ಸೆಂಟರ್, ಪುತ್ತೂರಿನಲ್ಲಿ ಎಲ್ಲಾ ಸೌಲಭ್ಯಗಳುಳ್ಳ ಸ್ಮಶಾನ, ರೋಟರಿಪುರದಲ್ಲಿ ಹಲವಾರು ಮನೆಗಳು, ವಿದ್ಯಾಸಂಸ್ಥೆಗಳಿಗೆ ಶಾಶ್ವತ ಕೊಡುಗೆಗಳು ಹೀಗೆ ಸಮುದಾಯಕ್ಕೆ ಕೊಡುಗೆಗಳನ್ನು ನೀಡುತ್ತಾ ಬಂದಿರುವುದಲ್ಲದೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಪುತ್ತೂರಿನ ಪ್ರಾಥಮಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಅದೇ ರೀತಿ ರೋಟರಿ ಸಂಸ್ಥೆಯ ಕಡೆಯಿಂದಲೂ ಶಾಸಕರಿಗೆ ಅಭಿವೃದ್ಧಿ ವಿಚಾರಗಳ ಕುರಿತು ಮನವಿ ನೀಡುವ ಚಿಂತನೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ವಲಯ-5ರ ಸಹಾಯಕ ಗವರ್ನರ್ ಜಗಜೀವನ್ ದಾಸ್ ರೈ, ಕಾರ್ಯಕ್ರಮ ಸಂಯೋಜಕರಾದ ಶ್ರೀಕಾಂತ್ ಕೊಳತ್ತಾಯ, ಝೇವಿಯರ್ ಡಿಸೋಜ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here