ಸುಳ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಎಲ್.ವೆಂಕಟೇಶ್ ನಾಮಪತ್ರ ಸಲ್ಲಿಕೆ

0

ಈ ಬಾರಿ ಜನತೆಯಿಂದ ಜೆಡಿಎಸ್‌ಗೆ ಬೆಂಬಲ-ಎಂ.ಬಿ.ಸದಾಶಿವ

ಕಾಣಿಯೂರು: ಡಬಲ್ ಇಂಜಿನ್ ಸರಕಾರ ಹಾಗೂ ಕಾಂಗ್ರೆಸ್ ಅಭಿವೃದ್ಧಿ ನಿರ್ಲಕ್ಷಿಸಿದೆ. ಆದ್ದರಿಂದ ಜನರು ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ರಾಜ್ಯದಲ್ಲಿ ಜನತೆ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಹೇಳಿದರು. ಅವರು ಸುಳ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಎಲ್. ವೆಂಕಟೇಶ್‌ರವರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದರು. ಜೆಡಿಎಸ್‌ನ ಚುನವಣಾ ಪ್ರಣಾಳಿಕೆಗಳು ಜನಮಾನಸದಲ್ಲಿ ಉಳಿದಿದೆ. ಪಂಚರತ್ನ ಯಾತ್ರೆ ಜೆಡಿಎಸ್‌ಗೆ ಶಕ್ತಿ ತುಂಬಿ ಪಕ್ಷ ಬಲಿಷ್ಠಗೊಂಡಿದೆ. ರಾಜ್ಯ ಹಾಗೂ ಸುಳ್ಯದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿ ಅಭಿವೃದ್ಧಿ ನಡೆಸಲಿದೆ ಎಂದ ಅವರು ಸುಳ್ಯ ಜೆಡಿಎಸ್ ಅಭ್ಯರ್ಥಿ ಎಚ್.ಎಲ್.ವೆಂಕಟೇಶ್ ಅವರು, ಉನ್ನತ ವಿದ್ಯಾಭ್ಯಾಸ ಜತೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿ ಅನುಭವ ಪಡೆದಿದ್ದಾರೆ. ಸುಳ್ಯ ಭಾಗದಲ್ಲೂ ಸಂಚರಿಸಿ ಜನರ ಜತೆ ಬೆರೆತಿದ್ದಾರೆ ಎಂದರು. ಸುಳ್ಯದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಮಾತನಾಡಿ, ಉದ್ಯೋಗ, ಶಿಕ್ಷಣ, ಮಹಿಳಾ ಸಬಲೀಕರಣ, ರೈತರಿಗೆ, ಅಟೋ ರಿಕ್ಷಾ ಚಾಲಕರಿಗೆ ಸೇರಿದಂತೆ ಎಲ್ಲರಿಗೂ ಪೂರಕವಾಗುವಂತ ಅಂಶಗಳು ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಅಗ್ರಹಾರ ದುಗ್ಗಪ್ಪ, ಮಹಾಲಕ್ಷ್ಮೀ ಕೊರಂಬಡ್ಕ, ಜ್ಯೋತಿ ಪ್ರೇಮಾನಂದ, ಸೋಮಸುಂದರ ಕೆ., ಹರಿಪ್ರಸಾದ್ ಎನ್ಕಾಜೆ, ಡಾ.ತಿಲಕ್ ಎ.ಎ., ಜೋಸೆಫ್ ಕಡಬ, ಪುರುಷೋತ್ತಮ ಮಾರಪ್ಪೆ, ಕಾರ್ತಿಕ್ ಸುಬ್ರಹ್ಮಣ್ಯ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಸುಳ್ಯ ನಗರದಲ್ಲಿ ಮೆರವಣಿಗೆ: ಸುಳ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ನಗರದಲ್ಲಿ ಮೆರವಣಿಗೆ ನಡೆಯಿತು. ರಥಬೀದಿಯ ಚುನಾವಣಾ ಕಚೇರಿಯ ಬಳಿಯಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.‌

ನಾಮಪತ್ರ ಸಲ್ಲಿಕೆ: ಸುಳ್ಯ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಲ್.ವೆಂಕಟೇಶ್ ಏ 19ರಂದು ನಾಮಪತ್ರ ಸಲ್ಲಿಸಿದರು. ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಮಿನಿ ವಿಧಾನ ಸೌಧಧ ಚುನಾವಣಾ ಕಛೇರಿಯಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಅರುಣ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನವಣಾಧಿಕಾರಿಗಳಾದ ಮಂಜುನಾಥ್ ಜಿ., ರಮೇಶ್ ಬಾಬು ಸಹಕರಿಸಿದರು. ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ, ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಅಗ್ರಹಾರ ದುಗ್ಗಪ್ಪ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ ಉಪಸ್ಥಿತರಿದ್ದರು.

ಜೆಡಿಎಸ್‌ನ ಪಂಚರತ್ನ ಯಾತ್ರೆ ಮೂಲಕ ಪಕ್ಷ ಬಲಿಷ್ಠಗೊಂಡಿದೆ. ಪಕ್ಷದ ಚುನಾವಣಾ ಪ್ರಣಾಳಿಕೆ ಜನ ಸಾಮಾನ್ಯರ ಶಕ್ತಿ ಹೆಚ್ಚಿಸಲು ಪೂರಕ ಅಂಶಗಳನ್ನು ಹೊಂದಿದೆ. ಸುಳ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು.
ಎಚ್.ಎಲ್.ವೆಂಕಟೇಶ್ ಜೆಡಿಎಸ್ ಅಭ್ಯರ್ಥಿ

LEAVE A REPLY

Please enter your comment!
Please enter your name here