ಜು.9ರಂದು ಉಪ್ಪಿನಂಗಡಿಯಲ್ಲಿ ಹಲಸಿನ ಹಬ್ಬ

0


ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ ಘಟಕ, ಐ ಸಿ ಎ ಆರ್ – ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ನವತೇಜ ಪುತ್ತೂರು ಇವುಗಳ ಸಹಯೋಗದಲ್ಲಿ ಜು.9ರಂದು ಉಪ್ಪಿನಂಗಡಿಯಲ್ಲಿ ‘ಹಲಸಿನ ಹಬ್ಬ-23’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಶ್ರೀ ಗುರು ಸುಧೀಂದ್ರ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲಸಿನ ಕೃಷಿಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಸಲುವಾಗಿ ಕೃಷಿಕರನ್ನು,ವ್ಯಾಪಾರಿಗಳನ್ನು, ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ತಂದು ಹಲಸಿನ ತಳಿಗಳ, ಉತ್ಪನ್ನಗಳ ಪ್ರದರ್ಶನದ ತನ್ಮೂಲಕ ಅವಕಾಶಗಳನ್ನು ತೆರೆದಿಡಲಾಗುವುದು. ಬೆಳಗ್ಗೆ 8 ಗಂಟೆಗೆ ಜೇಸಿಐ ಉಪ್ಪಿನಂಗಡಿಯ ಸ್ಥಾಪಕ ಡಾ.ಎಂ.ಆರ್ ಶೆಣೈ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಟಿ.ಜೆ. ರಮೇಶ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕ ಮಹೇಶ್ ಕಜೆ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್‌ನ ಅಧ್ಯಕ್ಷ ಕೆ.ವಿ. ಪ್ರಸಾದ್, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಜೇಸಿಐ ಎಸ್‌ಎಂಎ ವಲಯ 15 ರ ಸ್ಥಾಪಕಾಧ್ಯಕ್ಷ ಜಗನ್ನಾಥ ರೈ ಜಿ., ಜೇಸಿಐ ವಲಯ 15 ರ ಕಾರ್ಯಕ್ರಮ ನಿರ್ದೇಶಕಿ ಅಕ್ಷತಾ ಗಿರೀಶ್ ಭಾಗವಹಿಸಲಿದ್ದು, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಅಧ್ಯಕ್ಷತೆ ವಹಿಲಿಸಲಿದ್ದಾರೆ. ನವತೇಜ ಪುತ್ತೂರು ಇದರ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎನ್.ಪಿ. ಮಂಜುನಾಥ್ ಭಟ್ ಪೆರಿಯಡ್ಕ, ಧರ್ಣಪ್ಪ ನಾಯ್ಕ ಬೊಳ್ಳಾವು, ಜಯಪ್ರಸಾದ್ ಕಡಮ್ಮಾಜೆ, ರಾಜೀವ ಪೂಜಾರಿ ಹಳೆಯೂರು ಇವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ತಾಂತ್ರಿಕ ಸಮಾವೇಶದಲ್ಲಿ ಹಲಸು ಸಂವಹನ ನಡೆಯಲಿದ್ದು, ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್., ಲಕ್ಷ್ಮಣ್ ಚನ್ನಪ್ಪ ಬಟ್ರಬೈಲ್, ಲೋಹಿತ್ ಶೆಟ್ಟಿ ಡೆಪ್ಪಾಜೆ ಫಾಮ್ಸ್, ನವನೀತ ನರ್ಸರಿಯ ವೇಣುಗೋಪಾಲ ಎಸ್.ಜೆ. ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಉಪ್ಪಿನಂಗಡಿ ಶ್ರೀ ಸಹಸ್ತ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಜೇಸಿಐ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಜೇಸಿಐ ವಲಯ 15ರ ಪೂರ್ವಾಧ್ಯಕ್ಷ ಅಶೋಕ್ ಚೂಂತಾರು, ರೋಟರಿ ಕ್ಲಬ್ ಉಪ್ಪಿನಂಗಡಿಯ ಪೂರ್ವಾಧ್ಯಕ್ಷ ಅಜೀಜ್ ಬಸ್ತಿಕ್ಕಾರ್, ತುಳುನಾಡ ಒಕ್ಕೂಟ ಬೋಲ್ತೆರ್‌ನ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ಭಾಗವಹಿಸಲಿದ್ದು, ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಶೇಖರ ಗೌಂಡತ್ತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಮಕ್ಕಳಿಗೆ ಹಾಗೂ ದೊಡ್ಡವರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಬಹುತೇಕ ತಳಿಗಳು ನಾಶದಂಚಿನಲ್ಲಿದೆ: ನವತೇಜ ಟ್ರಸ್ಟ್‌ನ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಹಲವಾರು ಬಗೆಯ ಹಲಸು ಲಭಿಸುತ್ತಿತ್ತು. ಹಲವಾರು ಬಗೆ ಕಾಟು ಮಾವಿನ ಹಣ್ಣು ಲಭಿಸುತ್ತಿತ್ತು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಶೇ.90ರಷ್ಟು ಬಗೆಯ ಹಲಸು ಹಾಗೂ ಮಾವಿನ ಮರಗಳು ಕಡಿಯಲ್ಪಟ್ಟಿದ್ದು, ತಳಿಗಳೇ ನಾಶದಂಚಿಗೆ ಸಿಲುಕಿವೆ. ಈ ಕಾರಣಕ್ಕಾಗಿ ಹಣ್ಣುಗಳ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಸುವ ಸಲುವಾಗಿ, ಹಣ್ಣುಗಳನ್ನಾಧರಿತ ಉದ್ಯಮಗಳ ಸ್ಥಾಪನೆಗೆ ಪ್ರೇರಣೆ ನೀಡುವ ಸಲುವಾಗಿ ಹಲಸು ಹಬ್ಬವನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತಾರಗೊಳಿಸಲು ಗಮನ ಹರಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ವಿ. ಕುಲಾಲ್, ಜೆಸಿಐ ಉಪ್ಪಿನಂಗಡಿ ಘಟಕಾಧ್ಯಕ್ಷ ಶೇಖರ ಗೌಂಡತ್ತಿಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here