ರೆಖ್ಯ ನಿವಾಸಿ ಲೋಕೇಶ್ ನಾಪತ್ತೆ-ಹೊಳೆಬದಿ ಬೈಕ್ ಪತ್ತೆ; ನದಿಯಲ್ಲಿ ಹುಡುಕಾಟ

0

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಊರ್ನಡ್ಕ ನಿವಾಸಿ ಲೋಕೇಶ್(43ವ.)ಎಂಬವರು ಆ.14ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಇವರ ಬೈಕ್ ಉದನೆ ಸಮೀಪದ ಕಡೆಂಬಿಲ ಎಂಬಲ್ಲಿ ಗುಂಡ್ಯ ಹೊಳೆಬದಿಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು ಲೋಕೇಶ್ ಅವರು ಗುಂಡ್ಯಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ನೆಲೆಯಲ್ಲಿ ಆ.15ರಂದು ಹೊಳೆನೀರಿನಲ್ಲಿ ಹುಡುಕಾಟ ನಡೆಸಲಾಗಿದೆ.


ಆ.14ರಂದು ಸಂಜೆ 4 ಗಂಟೆಗೆ ಲೋಕೇಶ್ ಅವರು ಅಗತ್ಯ ಸಾಮಾಗ್ರಿ ಖರೀದಿಗೆಂದು ಮನೆಯಿಂದ ತನ್ನ ಬೈಕ್(ಕೆಎ21 ವೈ 8754)ನಲ್ಲಿ ಉದನೆ ಪೇಟೆಗೆಂದು ಹೋಗಿದ್ದರು. ಲೋಕೇಶ್ ಅವರ ಅಣ್ಣ ರಾಮಚಂದ್ರ ಗೌಡರವರು ನೆಲ್ಯಾಡಿಗೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ತಮ್ಮ ಲೋಕೇಶ್‌ರವರ ಬೈಕ್ ಉದನೆ ಸಮೀಪ ಕಡೆಂಬಿಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿಂತುಕೊಂಡಿರುವುದ್ದನ್ನು ನೋಡಿದ್ದರು. ರಾಮಚಂದ್ರ ಅವರು ಮತ್ತೆ ಮನೆಗೆ ಹೋಗಿ ಮನೆ ಕೆಲಸ ನಿರ್ವಹಿಸಿ ಡೈರಿಗೆ ಹಾಲು ನೀಡಿ ಬರುವವರೆಗೂ ಲೋಕೇಶ್ ಅವರ ಬೈಕ್ ಅಲ್ಲೇ ನಿಂತಿತ್ತು. ಈ ವೇಳೆ ಲೋಕೇಶ್ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಅವರ ಪತ್ನಿ ವಿಶಾಲರವರು ಕೆರೆ ಸ್ವೀಕರಿಸಿ ಮೊಬೈಲ್ ಮನೆಯಲ್ಲಿಯೇ ಇಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ. ಲೋಕೇಶ್ ಅವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ರಾಮಚಂದ್ರ ಗೌಡ ಹಾಗೂ ಇತರರು ಬೈಕ್ ಇದ್ದ ಅಸುಪಾಸಿನಲ್ಲಿ ಗುಂಡ್ಯ ನದಿ ಕಿನಾರೆಯ ಬಳಿ, ನೆರೆಕರೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಈ ಬಗ್ಗೆ ರಾಮಚಂದ್ರ ಗೌಡ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಅಗ್ನಿಶಾಮಕ/ಶೌರ್ಯ ತಂಡದವರಿಂದ ಹುಡುಕಾಟ:
ಲೋಕೇಶ್ ಅವರ ಬೈಕ್ ಗುಂಡ್ಯ ಹೊಳೆ ಬದಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರು ಗುಂಡ್ಯ ಹೊಳೆಗೆ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ಆ.15ರಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹೊಳೆ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ನಾಪತ್ತೆಯಾಗಿರುವ ಲೋಕೇಶ್ ಅವರ ಬಗ್ಗೆ ಸಂಜೆ ತನಕವೂ ಯಾವುದೇ ಸುಳಿವು ದೊರೆತಿಲ್ಲ ಎಂದು ವರದಿಯಾಗಿದೆ. ನೆಲ್ಯಾಡಿ ಹೊರಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here