ಅರಣ್ಯ ಭೂಮಿ ಕಂದಾಯ ಭೂಮಿಯಾಗಿ ಪರಿವರ್ತನೆ ಆರೋಪ ತಹಸಿಲ್ದಾರ್ ಅಜಿತ್ ರೈ ಸಹಿತ ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್

0

ಬೆಂಗಳೂರು:ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಿದ ಆರೋಪದಡಿ ತಹಸಿಲ್ದಾರ್ ಅಜಿತ್ ಕುಮಾರ್ ರೈ ಸೊರಕೆ ಸಹಿತ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿರುವುದಾಗಿ ವರದಿಯಾಗಿದೆ.


ಸಹಾಯಕ ಕಮಿಷನರ್ ಎಂ.ಜಿ.ಶಿವಣ್ಣ ಮತ್ತು ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧ ಅರಣ್ಯಾಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.ಬೆಂಗಳೂರು ಉತ್ತರದ ಯಲಹಂಕದ ಕೊತ್ತನೂರು ಗ್ರಾಮದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 17.34 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾರ್ಪಡಿಸಿದ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಕೆ.ಆರ್.ಪುರ ಹೋಬಳಿಯ ಕೊತ್ತನೂರಿನ ಸರ್ವೆ ನಂಬರ್ 47ರಲ್ಲಿರುವ 17 ಎಕರೆ 34 ಗುಂಟೆ ಭೂಮಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಜೂನ್ 2006ರಲ್ಲಿ ಅರಣ್ಯ ಎಂದು ಘೋಷಿಸಿದ್ದರು.ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.ಅರಣ್ಯ ಎಂದು ಘೋಷಿಸಿದ್ದ ಜಿಲ್ಲಾಧಿಕಾರಿಯವರ ನಿರ್ಧಾರವನ್ನು ನ್ಯಾಯಾಲಯಗಳು ಎತ್ತಿಹಿಡಿದಿದ್ದವು.2023ರ ಜನವರಿಯಲ್ಲಿ ಅಂದಿನ ಸಹಾಯಕ ಕಮಿಷನರ್ ಆಗಿದ್ದ ಶಿವಣ್ಣ ಮತ್ತು ಕೆ.ಆರ್.ಪುರ ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯವರು ಏಕಪಕ್ಷೀಯವಾಗಿ ಅರಣ್ಯ ಪ್ರದೇಶವನ್ನು ‘ಸರಕಾರಿ ಭೂಮಿ’ ಎಂದು ಬದಲಾಯಿಸಿದ್ದರು ಎನ್ನಲಾಗಿದೆ.


ಸಚಿವರಿಂದ ತನಿಖೆಗೆ ಆದೇಶ:
ಸಹಾಯಕ ಕಮಿಷನರ್ ಶಿವಣ್ಣ ಮತ್ತು ತಹಸಿಲ್ದಾರ್ ಅಜಿತ್ ಕುಮಾರ್ ರೈಯವರು ಅರಣ್ಯ ಪ್ರದೇಶವನ್ನು ಸರಕಾರಿ ಭೂಮಿ ಎಂದು ಏಕಪಕ್ಷೀಯವಾಗಿ ಬದಲಾಯಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ಸಲ್ಲಿಕೆಯಾಗಿತ್ತು.ಈ ಕುರಿತು ತನಿಖೆ ನಡೆಸುವಂತೆ ಸಚಿವ ಖಂಡ್ರೆ ಆದೇಶಿಸಿದ್ದರು.ಈ ಇಬ್ಬರು ಅಧಿಕಾರಿಗಳು 2006ರ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಇಲಾಖೆಯ ವಿಜಿಲೆನ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.ಅರಣ್ಯ ಭೂಮಿಯನ್ನು ಕಬಳಿಸುವ ಸಂಚು ನಡೆಯುತ್ತಿದೆ ಎಂದೂ ವರದಿಯಲ್ಲಿ ತಿಳಿಸಲಾಗಿತ್ತು.ಈ ಭೂಮಿಯನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅಕ್ರಮ ಬದಲಾವಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಇಲಾಖೆಗೆ ಸೂಚಿಸಿದ ಕೆಲವು ದಿನಗಳ ನಂತರ ಇದೀಗ ಅರಣ್ಯ ಇಲಾಖೆ ಈ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ.ಈ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 33 (ಅತಿಕ್ರಮಣ ನಿಷೇಧ), 104 (ನಿಬಂಧನೆಗಳ ಉಲ್ಲಂಘನೆ) ಮತ್ತು 104 ಸಿ (ಅಪರಾಧಕ್ಕೆ ಕುಮ್ಮಕ್ಕು ನೀಡುವ ಕಮಿಷನ್ ವ್ಯವಹರಿಸುತ್ತದೆ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


ಲೋಕಾಯುಕ್ತ
ಪೊಲೀಸರು ಬಂಧಿಸಿದ್ದರು:
ಕೆ.ಆರ್.ಪುರ ತಹಸಿಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯವರ ಸಹಿತ ರಾಜ್ಯದ ಸುಮಾರು 15 ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪದಲ್ಲಿ ಲೋಕಾಯುಕ್ತ ದಾಳಿ ನಡದಿತ್ತು.ಅಧಿಕಾರಿಗಳ ಮನೆ,ಕಚೇರಿ ಮತ್ತು ಆಪ್ತರ ಕಚೇರಿ,ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.ಅಜಿತ್ ಕುಮಾರ್ ರೈಯವರನ್ನು ಜೂ.29ರಂದು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ಲಕ್ಷಾಂತರ ರೂ.ನಗದು, ಚಿನ್ನ ಹಾಗೂ ಬೇನಾಮಿ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದರು.ಬಳಿಕ ಅಜಿತ್ ರೈಯವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

LEAVE A REPLY

Please enter your comment!
Please enter your name here