ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

0

ಶ್ರೀಕೃಷ್ಣ ಬ್ರಿಕ್ಸ್ ಅಂಡ್ ಟೈಲ್ಸ್ ಹಾಗೂ ಇಕೊಬ್ಲಿಸ್ ಸಂಸ್ಥೆಗಳಿಂದ ಮಾಹಿತಿ ಸಂಗ್ರಹ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಲ್ಲಡ್ಕದ ಶ್ರೀಕೃಷ್ಣ ಬ್ರಿಕ್ಸ್ ಆಂಡ್ ಟೈಲ್ಸ್ ಕಾರ್ಖಾನೆ ಹಾಗೂ ಬಲಿಪಗುಳಿಯ ಇಕೋಬ್ಲಿಸ್ ಹಾಳೆ ತಟ್ಟೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಯವೈಖರಿಯ ಬಗೆಗೆ ತಿಳಿದುಕೊಳ್ಳಲಾಯಿತು.


ಕಲ್ಲಡ್ಕದ ಶ್ರೀಕೃಷ್ಣ ಬ್ರಿಕ್ಸ್ ಆಂಡ್ ಟೈಲ್ಸ್ ಕಾರ್ಖಾನೆಗೆ ಬೇಟಿ ನೀಡಿ ಅಲ್ಲಿ ಹೆಂಚು ಹಾಗೂ ಮಣ್ಣಿನಿಂದ ಕುಂಡಗಳನ್ನು ಮಾಡುವ ವಿಧಾನ ಹಾಗೂ ಅವುಗಳಿಗೆ ರೂಪ ನೀಡುವ ವಿಧಾನವನ್ನು ಅರಿತುಕೊಳ್ಳಲಾಯಿತು. ಮಣ್ಣಿನ ಪರಿಕರಗಳನ್ನು ಮಾಡಿದ ಬಳಿಕ ಒಣಗಲು ತಿಂಗಳುಗಳ ಅವಧಿ ಬೇಕಾಗುತ್ತದೆ. ಬಳಿಕ ಬೆಂಕಿಯಲ್ಲಿ ದಹನ ಪ್ರಕ್ರಿಯೆ ನಡೆಸಿದಾಗ ಪರಿಕರಗಳು ಕೆಂಪು ವರ್ಣವನ್ನು ಪಡೆಯುತ್ತದೆ. ಹೀಗೆ ಅವು ಸಮರ್ಪಕವಾಗಿ ಸಿದ್ಧವಾದ ಬಳಿಕ ಅವುಗಳನ್ನು ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ ಎಂದು ಅಲ್ಲಿನ ಉದ್ಯೋಗಿಗಳು ಮಾಹಿತಿ ನಿಡಿದರು.


ಬಲಿಪಗುಳಿಯ ಇಕೋಬ್ಲಿಸ್ ಹಾಳೆ ತಟ್ಟೆ ಕಾರ್ಖಾನೆಯ ಪಾಲುದಾರರರಾದ ರಾಜಾರಾಮ್ ಸಿ.ಜಿ. ಅವರು ಹಾಳೆತಟ್ಟೆ ಉದ್ಯಮದ ಬಗೆಗೆ ಸಮಗ್ರ ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಸುಲಭಕ್ಕೆ ಲಭ್ಯವಾಗುವ ಹಾಗೂ ಹಾಳಾಗಿ ಹೋಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಲಾಯಿತು. ಆರಂಭದಲ್ಲಿ ಹವಾರು ಸವಾಲುಗಳನ್ನು ಎದುರಿಸಬೇಕಾದ ಪ್ರಮೇಯ ಎದುರಾಯಿತು. ಪ್ರಸ್ತುತ ಸ್ಥಳೀಯ ಗ್ರಾಮೀಣ ಜನತೆಗೆ ಉದ್ಯೋಗ ನೀಡುವ ಜೊತೆಗೆ ಅವರು ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ ನೀಡಿದಂತಾಗಿದೆ.
ಈಗ ನೂರಾರು ಮಂದಿ ಇಕೋ ಬ್ಲಿಸ್ ಸಂಸ್ಥೆಯ ಜೊತೆಗೆ ಪಾಲುದಾರರಾಗಿದ್ದು, ಹಾಳೆ ತಟ್ಟೆಗಳನ್ನು ಉತ್ಪಾದಿಸಿ ಸಂಸ್ಥೆಗೆ ನೀಡುತ್ತಿದ್ದಾರೆ. ಈ ಮೂಲಕ ಅವರೂ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಹಾಳೆ ತಟ್ಟೆಗಳನ್ನು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಸಂಸ್ಥೆ ಬೆಳವಣಿಗೆ ಹೊಂದುತ್ತಿದೆ. ಉತ್ಪದಕರಿಂದ ಗ್ರಾಹಕರ ವರೆಗೆ ನೇರವಾಗಿ ಸಂಸ್ಥೆಯೇ ಸಂವಹನ ನಡೆಸುತ್ತದೆ ಎಂದು ಅವರು ತಿಳಿಸಿದರು.


ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ, ಉಪನ್ಯಾಸಕರಾದ ಸಂಧ್ಯಾ, ಶಶಿಕಲಾ ವರ್ಕಾಡಿ, ಜಯಂತಿ ಪಿ., ಶ್ರೀ ಕೀರ್ತನಾ, ವೀಣಾ ಶಾರದಾ, ಗಿರೀಶ್ ಭಟ್, ಹರ್ಷಿತ್ ಪಿಂಡಿವನ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀರಾಮ್ ಹಾಗೂ ಪ್ರಿಯಾಲ್ ಆಳ್ವ ಸಹಕರಿಸಿದರು.

LEAVE A REPLY

Please enter your comment!
Please enter your name here