ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ವಿವೇಕ ಮುನ್ನುಡಿ-2024”

0

“ಶಕ್ತಿಪೂರಕವಾದ ಚಿಂತನೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ” : ಹರೀಶ್‌ ಪೂಂಜ

  1. ಪುತ್ತೂರು:“ಆಧುನಿಕ ಕಾಲದ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಅರಿವಿರುವುದಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಅವರ ಶಕ್ತಿ ಕುಂದುತ್ತಾ ಇದೆ. ವಿದ್ಯಾರ್ಥಿ ಶಕ್ತಿ ಒಂದಾಗಿ ಇಡೀ ರಾಜ್ಯವನ್ನೇ ಗೆದ್ದ ಉದಾಹರಣೆ ನಮ್ಮ ದೇಶದಲ್ಲಿದೆ. ಉತ್ತಮ ನಾಯಕತ್ವದಿಂದ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ.” ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್‌ ಪೂಂಜ ಹೇಳಿದರು.

 ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ 2024-25 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು “ಪದವಿಪೂರ್ವ ಶಿಕ್ಷಣದಲ್ಲಿ ಜೀವನ ಬದಲಾಗುತ್ತದೆ. ಒಬ್ಬ ವಿದ್ಯಾರ್ಥಿಯ ಶ್ರೇಯಸ್ಸು  ಅವನ ಯೋಚನೆಗಳಲ್ಲಿ, ನಡವಳಿಕೆಗಳಲ್ಲಿ ಇರುವುದು. ಪರಿಶ್ರಮದ ಜೀವನ ನಮ್ಮನ್ನು ಬಲು ಎತ್ತರಕ್ಕೆ ಕರೆದೊಯ್ಯಬಲ್ಲದು. ಮನೆಗೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ರಾಷ್ಟ್ರವನ್ನು ಕಟ್ಟಬೇಕಿದೆ.” ಪ್ರಜಾಪ್ರಭುತ್ವದ ಶ್ರೇಷ್ಠ ಅವಕಾಶವಾಗಿರುವ ಚುನಾವಣಾ ಪ್ರಕ್ರಿಯೆಯನ್ನು ವಿನೂತನವಾಗಿ ಪ್ರಯೋಗಿಸಿ ವಿದ್ಯಾರ್ಥಿಗಳು ಮತದಾನಗೈಯುವಲ್ಲಿ ಉತ್ತೇಜಿಸಿದ ವಿದ್ಯಾಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ  ಅಧ್ಯಕ್ಷ ರವೀಂದ್ರ ಪಿ. ಮಾತನಾಡಿ, “ವಿದ್ಯಾರ್ಥಿಗಳು ಭಾರತದ ಭವ್ಯ ಭವಿಷ್ಯ ಬರೆಯುವ ರೂವಾರಿಗಳು. ಗುರಿ, ಉದ್ದೇಶಗಳ ಸ್ಪಷ್ಟತೆಯಿದ್ದಾಗ ಸಾಗಲಿರುವ ದಾರಿಯು ಸ್ಪಷ್ಟವಾಗುತ್ತದೆ. ಇಂದಿನ ಓದುವ ಭರಾಟೆಯೊಳಗೆ ನಿಜವಾದ ಜೀವನ ಕಣ್ಮರೆಯಾಗುತ್ತಿದೆ. ನಾಯಕತ್ವವು ಜೀವನಕ್ಕೊಂದು ಚೌಕಟ್ಟನ್ನು ಒದಗಿಸಿ ಶಿಸ್ತುಬದ್ಧವಾದ ಬದುಕನ್ನು ನಡೆಸಲು ಪ್ರೇರೇಪಣೆಯನ್ನು ನೀಡುತ್ತದೆ” ಎಂದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಡಾ. ಕೆ. ಕೃಷ್ಣಪ್ರಸನ್ನ ಮಾತನಾಡಿ  “ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಮತದಾನ ಮಾಡಿ ದೇಶದ ಪ್ರಜಾಪ್ರಭುತ್ವವನ್ನು ಭದ್ರಪಡಿಸಬೇಕಾಗಿದೆ” ಎಂದರು.

ಪ್ರಸ್ತುತ ಶೈಕ್ಷಣಿಕ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಲೇಜು ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಹರ್ಷಿತ್ ಎಸ್.‌ನಾಯ್ಕ್‌, ಉಪಾಧ್ಯಕ್ಷರಾಗಿ ದ್ವಿತೀಯ ಕಲಾ ವಿಭಾಗದ ತೃಪ್ತಿ ಎ. ಕೆ., ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಸನಿಹ, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ಆಶ್ಲೇಷ್‌ ಎಸ್‌. ಆರ್. , ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕೀರ್ತನ್‌ ಎಸ್.‌ಕೆ. ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ತ್ರಿಷಾ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಹಾಗೂ ಕ್ರೀಡಾ ಪ್ರತಿನಿಧಿಗಳಿಗೆ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ  ಕಾಲೇಜಿನ ಪ್ರಾಂಶುಪಾಲ ಮಹೇಶ್‌ ನಿಟಿಲಾಪುರ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ ಶೆಟ್ಟಿಗಾರ್‌ ಚುನಾವಣಾ ಪ್ರಕಿಯೆಯ ವರದಿಯನ್ನು ಮಂಡಿಸಿದರು. ಕಾಲೇಜಿನ ಉಪಪ್ರಾಂಶುಪಾಲ ದೇವಿಚರಣ್‌ರೈ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಪಿ.ಕೆ. ಪರಮೇಶ್ವರ ಶರ್ಮ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಶರ್ಮಿಳಾ ಕೆ. ಎಂ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕಿ ರತ್ನಾವತಿ. ಬಿ  ವಂದಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  

LEAVE A REPLY

Please enter your comment!
Please enter your name here