ನೂಜೋಲು: ನೂತನ ಬಸ್ ತಂಗುದಾಣ ಉದ್ಘಾಟನೆ

0

ನೆಲ್ಯಾಡಿ: ಶಾಂತಿನಗರ ಆದರ್ಶ ಯುವಕ ಮಂಡಲದ ವತಿಯಿಂದ ಗೋಳಿತ್ತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ತಂಗುದಾಣದ ಉದ್ಘಾಟನೆ ಜು.13ರಂದು ನಡೆಯಿತು.
ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ ಉದ್ಘಾಟಿಸಿ ಬಸ್‌ನಿಲ್ದಾಣ ನಿರ್ಮಿಸಿ ಕೊಡುಗೆಯಾಗಿ ನೀಡಿರುವ ಆದರ್ಶ ಯುವಕ ಮಂಡಲದ ಸಾಮಾಜಿಕ ಚಟುವಟಿಕೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಹೇಮಲತಾ ಮುರಿಯೇಲು, ಆದರ್ಶ ಯುವಕ ಮಂಡಲದ ಗೌರವಾಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ, ಶಾಂತಿನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ರಜತ್‌ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.


ಸನ್ಮಾನ:
ಬಸ್ ತಂಗುದಾಣಕ್ಕೆ ಸ್ಥಳದಾನ ಮಾಡಿದ ಶಿವರಾಮ ನೂಜೋಲು, ವಸಂತ ನೂಜೋಲು ಅವರನ್ನು ಆದರ್ಶ ಯುವಕ ಮಂಡಲದ ವತಿಯಿಂದ ಗೌರವಿಸಲಾಯಿತು. ಆದರ್ಶ ಯುವಕ ಮಂಡಲದ ಅಧ್ಯಕ್ಷರಾದ ತೇಜಸ್ ಶಾಂತಿನಗರ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕುಶಾಲಪ್ಪ ನಾಯ್ಕ್ ನೂಜೋಲು ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಸದಸ್ಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


50 ಸಾವಿರ ರೂ.ವೆಚ್ಚದಲ್ಲಿ ನಿರ್ಮಾಣ:
ಶಾಂತಿನಗರ ಸಮೀಪದ ನೂಜೋಲು ಎಂಬಲ್ಲಿ ಬಸ್ ನಿಲ್ದಾಣ ಆಗಬೇಕೆಂಬುದು ಈ ಭಾಗದ ಗ್ರಾಮಸ್ಥರು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಭಾಗದ ಸಾರ್ವಜನಿಕರು ಬಸ್ ಹಾಗೂ ಇತರೇ ವಾಹನಗಳಿಗೆ ಮಳೆ, ಬಿಸಿಲಿನಲ್ಲೇ ಕಾಯಬೇಕಾಗಿತ್ತು. ಇದನ್ನು ಅರಿತ ಸ್ಥಳೀಯ ಶಾಂತಿನಗರ ಆದರ್ಶ ಯುವಕ ಮಂಡಲದ ಸದಸ್ಯರು ಊರವರ ಸಹಕಾರದೊಂದಿಗೆ ಸುಮಾರು 50 ಸಾವಿರ ರೂ.ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿ ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ. ಯುವಕ ಮಂಡಲದ ಈ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here