ಮನಸ್ಸಿನ ದೃಢತೆಯೊಂದಿಗೆ ದೇವರ ಕೃಪೆ ಅತ್ಯಂತ ಅಗತ್ಯ: ಶ್ರೀಕೃಷ್ಣ ಉಪಾಧ್ಯಾಯ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಇಎಸ್ಇ ಸಂಸ್ಥೆಯ ಶೈಕ್ಷಣಿಕ ವರ್ಷದ ಪುನರಾರಂಭವು ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಗಣಹೋಮದೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕೃಷ್ಣ ಉಪಾಧ್ಯಾಯ ಅವರು ವಿದ್ಯಾರ್ಥಿಗಳು ಗುರಿ ತಲುಪಬೇಕಾದರೆ ಏಕಾಗ್ರತೆ ಅಗತ್ಯ. ಮನಸ್ಸು ಸದೃಢಗೊಳ್ಳುವುದರ ಜೊತೆಗೆ ದೇವರ ಕೃಪೆಯೂ ಮುಖ್ಯ. ಹಾಗಾಗಿ ವಿದ್ಯಾಥಿಗಳ ಗುರಿ ಸಾಧನೆಗೆ ದೇವರ ಅನುಗ್ರಹ ಸದಾ ಇರಬೇಕಾಗುತ್ತದೆ ಎಂದು ನುಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಗಣ ಹೋಮದ ಮೂಲಕ ಶಾಲೆ ಶುಭಾರಂಭಗೊಂಡಿದೆ. ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದೆ ಒಳ್ಳೆಯ ವಿದ್ಯಾರ್ಥಿಗಳಾಗಿ ಮುಂದುವರೆಯಬೇಕು. ದೇವರನ್ನು ಸದಾ ಪ್ರಾರ್ಥಿಸಬೇಕು ಎಂದರಲ್ಲದೆ ವಿದ್ಯಾರ್ಥಿಗಳು ಗುರುಗಳ ಮಾತುಗಳನ್ನು ಪಾಲಿಸುತ್ತಾ ಬೆಳೆಯಬೇಕು. ಸದ್ಗುಣವಂತರಾಗುವುದಲ್ಲದೆ ತಂದೆ ತಾಯಿಗಳ ಮಾತುಗಳನ್ನು ಗೌರವಿಸಿ, ಒಳ್ಳೆಯ ಸಂಸ್ಕಾರವನ್ನು ಕಲಿತು, ದೇಶಪ್ರೇಮಿಗಳಾಗಿ ಹೊರಹೊಮ್ಮಬೇಕು ಎಂದು ನುಡಿದರು.
ಹಿಂದೂ ಧಾರ್ಮಿಕ ಸಂಪ್ರದಾಯದಂತೆ ವಿದ್ಯಾರ್ಥಿಗಳಿಗೆ ಆರತಿ ಮಾಡಿ, ತಿಲಕವಿಟ್ಟು, ಹೂ ಮುಡಿಸಿ ಹೊಸ ಆರಂಭಕ್ಕೆ ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಮಾಲತಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.