ಮಳೆಗೆ ಬಜತ್ತೂರು ಗ್ರಾಮದಲ್ಲಿ ವ್ಯಾಪಕ ಹಾನಿ

0

ಮಣಿಕ್ಕಳದಲ್ಲಿ ಗುಡ್ಡಜರಿದು ತೋಡಿಗೆ ಬಿದ್ದ ಮಣ್ಣು, ತೋಟ,ಗದ್ದೆ ಜಲಾವೃತ

ಕುದುರು ಡೀಕಯ್ಯ ಗೌಡರ ಮನೆಯ ಹಿಂಭಾಗಕ್ಕೆ ಧರೆ ಕುಸಿದು ಹಾನಿ

  • ಓಲೆಬಳ್ಳಿ, ಹೊಸಮನೆ ಎಂಬಲ್ಲೂ ಧರೆ ಕುಸಿತ

ನೆಲ್ಯಾಡಿ: ಮೇ.30ರಂದು ಬಜತ್ತೂರು ಗ್ರಾಮದಲ್ಲೂ ಭಾರೀ ಮಳೆಯಾಗಿದ್ದು ಹಲವೆಡೆ ವ್ಯಾಪಕ ಹಾನಿ ಸಂಭವಿಸಿದೆ.
ಮಣಿಕ್ಕಳ ಎಂಬಲ್ಲಿ ಗುಡ್ಡವೊಂದು ಜರಿದಿದ್ದು ಮಣ್ಣು ಉಕ್ಕಿ ಹರಿಯುತ್ತಿದ್ದ ತೋಡಿಗೆ ಬಿದ್ದು ನೀರಿನ ಹರಿವಿಗೆ ತಡೆಯಾಗಿ ನೆರೆ ನೀರು ಭತ್ತದ ಗದ್ದೆಗಳು ಮತ್ತು ಅಡಿಕೆ ತೋಟಗಳಿಗೆ ನುಗ್ಗಿದ ಪರಿಣಾಮ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇಲ್ಲಿನ ಕುದುರು ಡೀಕಯ್ಯ ಗೌಡ ಅವರ ಮನೆಯ ಹಿಂಭಾಗಕ್ಕೆ ಧರೆ ಕುಸಿದುಬಿದ್ದ ಪರಿಣಾಮ ಮನೆಯ ಹಿಂಭಾಗದಲ್ಲಿ ಅಳವಡಿಸಿದ್ದ ಸಿಮೆಂಟ್‌ಶೀಟ್‌ಗಳು ಹಾನಿಗೊಂಡಿವೆ. ಓಲೆಬಳ್ಳಿ ಶೀನಪ್ಪ ಗೌಡ ಮತ್ತು ಜಯಂತಿ ಅವರ ಮನೆಗಳಿಗೂ ಧರೆ ಕುಸಿದು ಬಿದ್ದಿದೆ. ಹೊಸಮನೆ ಜಯರಾಮ ಗೌಡ ಎಂಬವರ ಮನೆಯ ಭಾಗದಲ್ಲಿಯೂ ಗುಡ್ಡ ಕುಸಿದುಬಿದ್ದು, ಕೃಷಿಹಾನಿ ಸಂಭವಿಸಿದೆ.

ಪೆರಿಯಡ್ಕದಲ್ಲಿ ಮನೆಗೆ ನುಗ್ಗಿದ ಮಣ್ಣು;
ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಲ್ಲಿ ಗುಡ್ಡ ಜರಿದು ಮನೆಯೊಂದಕ್ಕೆ ನೀರು ಮತ್ತು ಮಣ್ಣು ಹರಿದು ಬಂದು ಆತಂಕ ಸೃಷ್ಟಿಸಿದೆ. ಇಲ್ಲಿನ ನಾರಾಯಣ ಭಟ್ ಎಂಬವರ ಮಾಲಕತ್ವದ ಬಾಡಿಗೆ ಮನೆಗೆ ಧಾರಕಾರವಾಗಿ ಸುರಿದ ಮಳೆಯಿಂದ ತೇವಗೊಂಡ ಗುಡ್ಡ ಜರಿದು ಈ ಅವಾಂತರ ನಡೆದಿದೆ. ಸ್ಥಳೀಯರು ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಗೊಳಿಸಿದ್ದಾರೆ. ಒಟ್ಟಿನಲ್ಲಿ ಎಡೆಬಿಡದೆ ಧಾರಕಾರವಾಗಿ ಸುರಿದ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದೆ.

LEAVE A REPLY

Please enter your comment!
Please enter your name here