ಪುತ್ತೂರು: ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಪರ್ಪುಂಜ ಜಂಕ್ಷನ್ನಲ್ಲಿ ಶ್ರೀಧರ ಪೂಜಾರಿಯವರ ಕೋಳಿ ಫಾರಂ ಪಕ್ಕದಲ್ಲಿದ್ದ ಅಪಾಯಕಾರಿ ಮರವನ್ನು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಜೂ.11ರಂದು ತೆರವು ಮಾಡಲಾಯಿತು. ಲಕ್ಷ್ಮೀ ಮತ್ತು ಗಿರಿಜಾ ಎಂಬಿಬ್ಬರ ಮನೆಯ ಪಕ್ಕದಲ್ಲಿ ಈ ಮರವಿತ್ತು. ಮರ ಸಂಪೂರ್ಣ ಒಣಗಿ ಹೋಗಿತ್ತು. ಮರವೇನಾದರೂ ಮುರಿದು ಬಿದ್ದಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇತ್ತು. ಈ ಬಗ್ಗೆ ವರ್ಷಗಳ ಹಿಂದೆಯೇ ಈ ಎರಡೂ ಮನೆಯವರು ಮರವನ್ನು ತೆರವು ಮಾಡಿಕೊಡಿ ಎಂದು ಸ್ಥಳೀಯ ಗ್ರಾಪಂಗೆ ಮನವಿ ಮಾಡಿಕೊಂಡಿದ್ದರು. ಇದಲ್ಲದೆ ವರ್ಷಗಳ ಹಿಂದೆ ಒಳಮೊಗ್ರು ಗ್ರಾಮಸಭೆಯಲ್ಲೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಪರ್ಪುಂಜರವರು ಈ ಅಪಾಯಕಾರಿ ಮರವನ್ನು ತೆರವು ಮಾಡಬೇಕು, ಇಲ್ಲದಿದ್ದರೆ ಅಪಾಯವಿದೆ ಎಂದು ಕೇಳಿಕೊಂಡಿದ್ದರು. ಪಂಚಾಯತ್ನವರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅರಣ್ಯ ಇಲಾಖೆಯವರು ಮರವನ್ನು ನೋಡಿದ್ದಾರೆ ಹೋಗಿದ್ದಾರೆ ಬಿಟ್ಟರೆ ತೆರವು ಮಾಡುವ ಕೆಲಸವನ್ನು ಮಾಡಿರಲಿಲ್ಲ. ಮೇ.31ರಂದು ಗ್ರಾಪಂನಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲೂ ಮರದ ಬಗ್ಗೆ ವಿಷಯ ಪ್ರಸ್ತಾಪವಾಗಿತ್ತು. ಮರ ಇರುವ ಜಾಗ ಸರಕಾರಿಯೋ ಅಥವಾ ಖಾಸಗಿಯೋ ಎಂದು ನಕ್ಷೆ ಕೊಡುವಂತೆ ಅರಣ್ಯ ಇಲಾಖೆಯವರು ಕೇಳಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಗ್ರಾಪಂ ಪಿಡಿಓರವರು ಸಭೆಗೆ ತಿಳಿಸಿದ್ದರು. ಈ ಬಗ್ಗೆ ಕಂದಾಯ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯ ಕೂಡ ಮಾಡಲಾಗಿತ್ತು.
ಮರದ ಅಪಾಯದ ಬಗ್ಗೆ ಸುದ್ದಿ ವರದಿ ಪ್ರಸಾರ ಮಾಡಿತ್ತು(https://puttur.suddinews.com/archives/890531)
ಪರ್ಪುಂಜದಲ್ಲಿರುವ ಅಪಾಯಕಾರಿ ಮರದ ಬಗ್ಗೆ ‘ಮರದಿಂದ ಮರಣ ಸಂಭವಿಸಿದರೆ ಅರಣ್ಯ ಇಲಾಖೆಯವರೇ ಹೊಣೆಗಾರರು…!?’ ಎಂಬ ತಲೆಬರಹದಡಿಯಲ್ಲಿ ಸುದ್ದಿ ಬಿಡುಗಡೆ ವೆಬ್ ಸೈಟ್ನಲ್ಲಿ ಜೂ.3ರಂದು ವರದಿ ಪ್ರಸಾರಗೊಂಡಿತ್ತು. ವರದಿಯಲ್ಲಿ ಮನೆಯವರ ನೋವಿನ ಮಾತುಗಳೊಂದಿಗೆ ಈ ಬಗ್ಗೆ ಶಾಸಕರು ಗಮನ ಹರಿಸುವಂತೆ ಕೇಳಿಕೊಳ್ಳಲಾಗಿತ್ತು. ಮರ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂಬುದನ್ನು ತಿಳಿಸಲಾಗಿತ್ತು. ಸುದ್ದಿ ವೆಬ್ಸೈಟ್ನಲ್ಲಿ ವರದಿ ಪ್ರಸಾರಗೊಂಡ ವಾರದೊಳಗೆ ಮರವನ್ನು ತೆರವು ಮಾಡುವ ಕೆಲಸ ಅರಣ್ಯ ಇಲಾಖೆಯಿಂದ ಆಗಿದೆ. ಯಾವುದೇ ರಸ್ತೆ ಬ್ಲಾಕ್, ವಾಹನ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸ್ಥಳೀಯ ಮರದ ವ್ಯಾಪಾರಿ ಸಂಶುದ್ದೀನ್ ಹಾಗೂ ತಂಡದವರು ಮರವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಬಿ.ಕೆ ಮತ್ತು ಸಿಬ್ಬಂದಿಗಳು, ಮೆಸ್ಕಾಂನ ಚಂದ್ರಶೇಖರ್ ಮತ್ತು ತಂಡದವರು, ಪಂಚಾಯತ್ನ ಕೇಶವ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರ ಸ್ಪಂದನೆ
ಅಪಾಯಕಾರಿ ಮರದ ಬಗ್ಗೆ ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿಯವರು ಶಾಸಕರ ಗಮನಕ್ಕೆ ತಂದಿದ್ದರು. ತಕ್ಷಣವೇ ಸ್ಪಂದಿಸಿದ ಶಾಸಕರು ಬಡ ಕುಟುಂಬಗಳಿಗೆ ತೊಂದರೆಯಾಗುವ ಯಾವುದೇ ಮರವಿದ್ದರೂ ಅದನ್ನು ತಕ್ಷಣವೇ ತೆರವುಗೊಳಿಸಿ ಎಂದು ಸೂಚನೆ ನೀಡಿದ್ದರು. ಸಾರ್ವಜನಿಕರಿಗೆ, ಬಡ ಕುಟುಂಬಗಳಿಗೆ ತೊಂದರೆಯಾಗಬಾರದು. ತೊಂದರೆಯಾಗುತ್ತದೆ ಅಥವಾ ಅಪಾಯ ಇದೆ ಎಂಬುದು ಸಾಬೀತಾದರೆ ತಕ್ಷಣವೇ ಮರವನ್ನು ತೆರವು ಮಾಡಿ ಎಂದು ತಿಳಿಸಿದ್ದರು. ಅದರಂತೆ ಅರಣ್ಯ ಇಲಾಖೆಯ ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಬಿ.ಕೆಯವರ ನೇತೃತ್ವದಲ್ಲಿ ಮರವನ್ನು ತೆರವು ಮಾಡಲಾಗಿದೆ.
