ಪುತ್ತೂರು: ಪವಾಡಪುರುಷ ಸಂತರಾದ ಸಂತ ಅಂತೋನಿಯವರು ಜೂ.13 ರಂದು ಇಹಲೋಕವನ್ನು ತ್ಯಜಿಸಿ ಸ್ವರ್ಗಕ್ಕೇರಿದ ದಿನವನ್ನು ಸಂತ ಅಂತೋನಿ ಚರ್ಚ್ ನಲ್ಲಿ ಪ್ರತಿ ವರ್ಷ ವಾರ್ಷಿಕ ಹಬ್ಬವನ್ನಾಗಿ ಆಚರಿಸಲಾಗುತ್ತದೆ.
ಆ ಪ್ರಯುಕ್ತ ಚರ್ಚ್ ನಲ್ಲಿ ಮೇ 31 ರಿಂದ ಜೂ. 12ರ ತನಕ 13 ದಿನಗಳ ವಿಶೇಷ ಪ್ರಾರ್ಥನೆ (ನವೇನಾ)ಯು ನಡೆದಿದ್ದು ಭಕ್ತಾದಿಗಳು ತಮ್ಮ ಬೇಡಿಕೆ, ಹರಕೆಗಳನ್ನು ಪವಾಡ ಪುರುಷ ಸಂತ ಅಂತೋನಿಯವರ ಮೂಲಕ ದೇವರಿಗೆ ಸಮರ್ಪಿಸುವ ಮೂಲಕ ಶ್ರದ್ಧೆಯಿಂದ ಭಾಗವಹಿಸಿದ್ದರು. ಕಳೆದ ತಿಂಗಳು ಚರ್ಚ್ ತನ್ನ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿತ್ತು.
ದಿವ್ಯ ಬಲಿಪೂಜೆ:
ಹಬ್ಬದ ಪ್ರಧಾನ ದಿವ್ಯ ಬಲಿಪೂಜೆಯನ್ನು ಮಂಗಳೂರು ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ವಂ|ಫಾವುಸ್ತಿನ್ ಲೂಕಾಸ್ ಲೋಬೊರವರು ನೆರವೇರಿಸಲಿದ್ದಾರೆ. ಪುತ್ತೂರು ವಲಯದ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಸಹಿತ ಪುತ್ತೂರು ವಲಯದ ಧರ್ಮಗುರುಗಳು, ಫ್ರಾನ್ಸಿಸ್ಕನ್ ಸಭೆಯ ಧರ್ಮಗುರುಗಳು, ಧರ್ಮಭಗಿನಿಯರು, ಕ್ರೈಸ್ತ ಬಾಂಧವರು ಭಾಗವಹಿಸಲಿದ್ದಾರೆ ಎಂದು ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, 21 ಆಯೋಗಗಳ ಸಂಚಾಲಕ ಜೆರಿ ಪಾಯಿಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.