ಪುತ್ತೂರು: ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜು.23ರಂದು ‘ಹದಿಹರೆಯದ ಸವಾಲುಗಳು ಮತ್ತು ಜವಾಬ್ದಾರಿಗಳು’ ಎಂಬ ವಿಷಯದ ಕುರಿತು ‘ಚೇತನ’ ಕಾರ್ಯಕ್ರಮ ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ವೀಣಾ ಎನ್ ಸುಳ್ಯ ಇವರು ವಿದ್ಯಾರ್ಥಿಗಳಿಗೆ, ಹದಿಹರೆಯದ ಆರೋಗ್ಯ ,ಮಾನಸಿಕ ವ್ಯತ್ಯಾಸಗಳು, ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆ ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಮಕ್ಕಳ ಭಾವನಾತ್ಮಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಬಗ್ಗೆ ಸೂಕ್ತ ಉದಾಹರಣೆಯೊಂದಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರು ಕೇಳಿದ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುವ ಮೂಲಕ ಅವರ ಸಂದೇಹಗಳನ್ನು ನಿವಾರಿಸಿ, ಮಾರ್ಗದರ್ಶನಗೈದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸಿಂಧು ವಿ. ಜಿ ಮತ್ತು ಉಪಪ್ರಾಂಶುಪಾಲರಾದ ಶ್ರೀದೇವಿ ಹೆಗ್ಡೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಸಾಕ್ಷತ್ ಶೆಟ್ಟಿ .ಬಿ ಪರಿಚಯಿಸಿ, ಆರಾಧನಾ ಬಿ ಸ್ವಾಗತಿಸಿ, ಮಾನ್ವಿ ಕಜೆ ನಿರೂಪಿಸಿ, ತನುಶ್ರೀ ಸಾಯಿನಾಥ್ ಮಳವಾಡೆ ಧನ್ಯವಾದ ಸಮರ್ಪಿಸಿದರು. ಕೊನೆಗೆ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.