ಕಡಬ:ಇಲ್ಲಿನ ಪೇರಡ್ಕ ಸಮೀಪದ ಇಮ್ಯಾನ್ಯೂವೆಲ್ ಎ.ಜಿ ಚರ್ಚ್ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ ದುಷ್ಕರ್ಮಿಗಳು ಚರ್ಚ್ ಒಳಗಡೆ ಹನುಮಾನ್ ದೇವರ ಫೋಟೋ ಇರಿಸಿ ದೀಪ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ, ಆದರೆ ಈ ಘಟನೆಯನ್ನು ಅಲ್ಲಗಲೆದಿರುವ ಹಿಂದೂ ಸಂಘಟನೆಗಳು ಇದರ ಸತ್ಯಾಸತ್ಯಾತೆ ತಿಳಿಯಲು ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮತ್ತು ಕಡಬ ತಾಲೂಕಿಗೆ ಒಳಪಡುವ ಪೇರಡ್ಕದಲ್ಲಿ ಇರುವ ಇಮ್ಯಾನುವೆಲ್ ಎ.ಜಿ ಚರ್ಚ್ನಲ್ಲಿ ದುರಸ್ತಿ ಕಾಮಗಾರಿಗಳು ನಡೆಯುತ್ತಿದೆ. ರಾತ್ರಿ ಇಲ್ಲಿಗೆ ಆಗಮಿಸಿರುವ ಕಿಡಿಗೇಡಿಗಳು ಚರ್ಚ್ನ ಗೋಪುರದಲ್ಲಿರುವ ಶಿಲುಬೆಯನ್ನು ತೆಗೆದು ಕೇಸರಿ ಧ್ವಜ ಹಾಕಿದ್ದಾರೆ. ಚರ್ಚ್ ಬಾಗಿಲು ಒಡೆದು ಒಳಗಡೆ ಪ್ರವೇಶಿಸಿ ಹನುಮಾನ್ ದೇವರ ಫೋಟೋ ಇಟ್ಟು ದೀಪ ಹಚ್ಚಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಒಂದು ವಿಡಿಯೋ ಒಂದು ಮಲಯಾಳಂ ಭಾಷೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಈ ಧ್ವಜ ಹಾಗೂ ಹನುಮಾನ್ ಫೋಟೋವನ್ನು ಚರ್ಚ್ನವರೇ ಹೆಚ್ಚಿನ ಸಮಸ್ಯೆ ಆಗುವುದು ಬೇಡ ಎಂದು ತೆರವು ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ .