ವೇಣೂರು: ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ 17ರ ವಯೋಮಾನದ ಬಾಲಕ-ಬಾಲಕಿಯರ ಕ್ರೀಡಾಕೂಟದ ಉದ್ಘಾಟನೆಯು ಅ.28ರಂದು ಬಜಿರೆ ಸ.ಉ.ಪ್ರಾ. ಶಾಲೆಯ ಮೈದಾನದಲ್ಲಿ ಜರುಗಿತು.
ತಾಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಎಸ್. ತುಳುಪುಳೆ ಅವರು ಸಮಾರಂಭವನ್ನು ಉದ್ಘಾಟಿಸಿ, ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ವಿದ್ಯಾರ್ಥಿಗಳು ಎಳವೆಯಲ್ಲೇ ಮಾನಸಿಕವಾಗಿ, ಬೌದ್ಧಿಕವಾಗಿ ಶಾರೀರಿಕವಾಗಿ ಸದೃಢವಾಗಲು ಕ್ರೀಡೆ ಸ್ಪೂರ್ತಿದಾಯಕವಾಗಿದೆ ಎಂದರು.
ಬಜಿರೆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಪೂಜಾರಿ ಕಲ್ಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಬಜಿರೆ ಶಾಲೆಯ ಮುಖ್ಯಶಿಕ್ಷಕಿ ಕಮಲಾಜಿ ಎಸ್. ಜೈನ್, ತಾಯಂದಿರ ಸಮಿತಿ ಅಧ್ಯಕ್ಷ ಜಯಶ್ರೀ, ಪತ್ರಕರ್ತ ಪದ್ಮನಾಭ ಕುಲಾಲ್ ವೇಣೂರು, ವೇಣೂರು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಲೋಕಯ್ಯ ಕೆ., ಶಿಕ್ಷಕ ರವೀಂದ್ರ ಕೆ. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಿತಿಷಾ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಾರಾವಿ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಶೀಲ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಕೋದಂಡರಾಮ ವಂದಿಸಿದರು. ಶಿಕ್ಷಕ ದೇವದಾಸ್ ನಾಯಕ್ ನಿರೂಪಿಸಿದರು.