- ವರ್ಣರ ಪಂಜುರ್ಲಿ, ಪಿಲಿಭೂತ ದೈವದ ನೇಮೋತ್ಸವ, ಅನ್ನಸಂತರ್ಪಣೆ
ಪುತ್ತೂರು: ಒಳಮೊಗ್ರು ಗ್ರಾಮದ ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜ.31ರಂದು ಬೆಳಿಗ್ಗೆ ವರ್ಣರ ಪಂಜುರ್ಲಿ ದೈವದ ನೇಮ ನಡೆದು ಭಕ್ತಾಧಿಗಳಿಗೆ ಗಂಧ ಪ್ರಸಾದ ವಿತರಣೆ ಬಳಿಕ ಶ್ರೀ ಪಿಲಿಭೂತ ದೈವದ ನೇಮ, ಗಂಧ ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರಪರವೂರ ನೂರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ಬಳಿಕ ಶ್ರೀ ಗುಳಿಗ ದೈವದ ನೇಮ ನಡೆದು ಸಂಜೆ ಪೂಮಾಣಿ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಭಂಡಾರ ರಾಜಮಾಡದಿಂದ ಇಳಿಸಿ ಮುಗೇರು ಕದಿಕೆ ಚಾವಡಿ ಹಾಗೂ ಕೈಕಾರ ದೈವಸ್ಥಾನದಲ್ಲಿ ಏರಿಸುವುದು, ಪಿಲಿಭೂತ ದೈವ ಭಂಡಾರ ಪಿಲಿಭೂತ ಮಾಡದಲ್ಲಿ ತಂಬಿಲ ಸೇವೆ ಮಾಡಿ ಕದಿಕೆ ಚಾವಡಿಯಲ್ಲಿ ಏರಿಸುವುದು, ಮಲರಾಯ ದೈವಕ್ಕೆ ಗುತ್ತು ಆವರಣದಲ್ಲಿ ತಂಬಿಲ ಸೇವೆ ಮಾಡಿ ಕದಿಕೆ ಚಾವಡಿಯಲ್ಲಿ ಏರಿಸುವುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರರುಗಳಾದ ಎ.ಚಿಕ್ಕಪ್ಪ ನಾಕ್ ಅರಿಯಡ್ಕ, ಎ.ಜಿ ವಿಜಯ ಕುಮಾರ್ ರೈ ಮುಗೇರು, ನಿತ್ಯಾನಂದ ಶೆಟ್ಟಿ ಕೈಕಾರ ಹಾಗೂ ಗ್ರಾಮಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.
ನಾಳೆ (ಫೆ.1) ಊರ್ವದಲ್ಲಿ
ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಉರ್ವದಲ್ಲಿ ನಡೆಯಲಿದ್ದು ಫೆ. ೧ ರಂದು ಬೆಳಿಗ್ಗೆ ಉರ್ವದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಸಂಜೆ ಗಂಟೆ ೪ ಕ್ಕೆ ಶ್ರೀ ದುರ್ಗಾಪೂಜೆ, ಸಂಜೆ ೪.೩೦ ಕ್ಕೆ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಪಂಜುರ್ಲಿ ದೈವದ ನೇಮ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.