ಉಪ್ಪಿನಂಗಡಿ: ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದ ಟ್ರಕ್ ತನ್ನ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿದ ಲಾರಿಯು ಮಗುಚಿ ಬಿದ್ದ ಘಟನೆ ಕರ್ವೇಲ್ನ ಹನಂಗೂರು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಘಟನೆಯಿಂದ ಲಾರಿಯ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಛತ್ತೀಸ್ಗಡದಿಂದ 34 ನೆಕ್ಕಿಲಾಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ತುಂಬಿಕೊಂಡು ಬಿ.ಸಿ.ರೋಡ್- ಉಪ್ಪಿನಂಗಡಿ ಮಾರ್ಗವಾಗಿ ನೆಕ್ಕಿಲಾಡಿಗೆ ಆಗಮಿಸುತ್ತಿದ್ದ ಸಂದರ್ಭ ಅಲಂಗೂರಿನ ತಿರುವಿನಲ್ಲಿ ಉಪ್ಪಿನಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಟ್ರಕ್ಕೊಂದನ್ನು ಚಾಲಕ ಚಲಾಯಿಸಿಕೊಂಡು ಬಂದಿದ್ದು, ಇದು ಲಾರಿಗೆ ಡಿಕ್ಕಿಯಾಗುವ ಸಂಭವವಿತ್ತು. ಇದನ್ನು ಅರಿತ ಲಾರಿಯ ಚಾಲಕ ತನ್ನ ಲಾರಿಯನ್ನು ರಸ್ತೆ ಬದಿಗೆ ಇಳಿಸಿದ್ದು, ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ರಸ್ತೆ ಬದಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕ ಛತ್ತೀಸ್ಗಡ ಮೂಲದ ಮಹೇಶ್ ಹಾಗೂ ಕ್ಲೀನರ್ ರಾಜೇಶ್ ಅಪಾಯದಿಂದ ಪಾರಾಗಿದ್ದಾರೆ.
ರಸ್ತೆ ಬದಿಯೇ ಕಂಟಕ!: ಅಲಂಗೂರುನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯೇ ವಾಹನ ಸವಾರರಿಗೆ ಕಂಟಕವಾಗಿದ್ದು, ಇದು ಸೇರಿದಂತೆ ಈ ಒಂದು ವರ್ಷದಲ್ಲಿ ಇದೇ ಸ್ಥಳದಲ್ಲಿ ಒಟ್ಟು ಮೂರು ವಾಹನಗಳು ಮಗುಚಿ ಬಿದ್ದಿವೆ. ಇಲ್ಲಿ ಹೆದ್ದಾರಿ ಇಕ್ಕಟ್ಟಾಗಿದ್ದು, ಇಳಿಜಾರಿನ ತಿರುವನ್ನು ಹೊಂದಿದೆ. ನೆಕ್ಕಿಲಾಡಿಯಿಂದ ಬರುವಾಗ ಇಳಿಜಾರು ಪ್ರದೇಶ ಸಿಗುತ್ತಿದ್ದು, ಕೆಲವು ವಾಹನ ಚಾಲಕರು ಅತೀ ವೇಗದಿಂದ ಇಲ್ಲಿ ಬರುತ್ತಾರೆ. ಆಗ ಅವರ ವಾಹನ ತಿರುವಿನಲ್ಲಿ ರಸ್ತೆಯ ವಿರುದ್ಧ ಪಥದತ್ತ ಬಂದು ಬಿ.ಸಿ.ರೋಡ್ ಕಡೆಯಿಂದ ಬರುತ್ತಿರುವ ವಾಹನಗಳಿಗೆ ಅಪಘಾತವಾಗುವ ಸಂಭವವೇ ಹೆಚ್ಚಾಗಿರುತ್ತದೆ. ಈ ಅಪಘಾತವನ್ನು ತಪ್ಪಿಸುವ ಎಂದು ರಸ್ತೆಯ ಕೆಳಗೆ ವಾಹನಗಳನ್ನು ಇಳಿಸಿದರೆ ವಾಹನ ಮಗುಚಿ ಬೀಳುತ್ತದೆ. ಯಾಕೆಂದರೆ ರಸ್ತೆಯ ಬದಿಯ ಫುಟ್ಪಾತ್ ಇಲ್ಲಿ ಚರಂಡಿಯಂತಿದ್ದು, ಸುಮಾರು ಒಂದು ಫೀಟ್ನಷ್ಟು ಆಳವಿದೆ. ಇದರೊಳಗೆ ಚಕ್ರಗಳು ಸಿಲುಕಿಕೊಂಡು ವಾಹನಗಳು ಎಡಬದಿಗೆ ವಾಲಿ ಮಗುಚಿ ಬೀಳುತ್ತವೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದಕ್ಕೊಂದು ಕಾಯಕಲ್ಪ ತಪ್ಪಿಸುವುದು ಒಳಿತು. ಇಲ್ಲದಿದ್ದಲ್ಲಿ ಹಲವು ಇಲ್ಲಿ ಇನ್ನಷ್ಟು ವಾಹನಗಳು ಅಪಘಾತವಾಗುವ ಸಾಧ್ಯತೆಗಳಿವೆ.