ವಿಶೇಷ ಸಭೆ ಕರೆದ ಪಂಚಾಯತ್, ವಿಷಾದ ವ್ಯಕ್ತಪಡಿಸಿದ ಬಳಿಕ ವಿವಾದ ಇತ್ಯರ್ಥ
ಪಂಚಾಯತ್ನ ಅಭಿವೃದ್ಧಿಗೆಂದು ರಚಿಸಲ್ಪಟ್ಟ ವಾಟ್ಸಾಪ್ ಗ್ರೂಪೊಂದರಲ್ಲಿ ಹಾಕಲಾದ ಕಮೆಂಟ್ ಒಂದರಿಂದ ಅಸಮಾಧಾನಗೊಂಡ ಪಂಚಾಯತ್ನವರು ವಿಶೇಷ ಸಭೆ ಕರೆದ ಹಾಗೂ ಈ ಸಭೆಗೆ ಆಗಮಿಸಿದ ಕಮೆಂಟ್ ಹಾಕಿದ ವ್ಯಕ್ತಿ ವಿಷಾದ ವ್ಯಕ್ತಪಡಿಸಿದ್ದರಿಂದ ವಿವಾದ ಇತ್ಯರ್ಥಗೊಂಡ ಘಟನೆ ನಡೆದಿದೆ.
ಚೆಂಬು ಗ್ರಾ.ಪಂ. ವ್ಯಾಪ್ತಿಯಲ್ಲಿ ಇತ್ತೀಚೆಗೆ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ವಾಟ್ಸಾಪ್ ಗ್ರೂಪೊಂದು ರಚನೆಯಾಗಿತ್ತು. ಅಭಿವೃದ್ಧಿಯ ಚರ್ಚೆಯ ನಡೆವೆ ಪಂಚಾಯತ್ ಕಾರ್ಯವೈಖರಿಯನ್ನು ಟೀಕಿಸುವ ಕಮೆಂಟ್ಗಳೂ ಬಂದಿತ್ತು. ಈ ಟೀಕೆಯ ವೇಳೆ ಪ್ರಸ್ತಾಪವಾದ ಶಬ್ಧವೊಂದರಿಂದ ಅಸಮಾಧಾನಗೊಂಡ ಪಂಚಾಯತ್ನವರು ಇದರ ಚರ್ಚೆಗೆಂದು ವಿಶೇಷ ಸಭೆ ಕರೆದರು. ಹಲವಾರು ಮಂದಿ ಇದರಲ್ಲಿ ಭಾಗವಹಿಸಿದ್ದರು. ಈ ಗ್ರೂಪಿನಲ್ಲಿ ಅಭಿವೃದ್ಧಿ ಕುರಿತಂತೆ ಬಹಳಷ್ಟು ಚರ್ಚೆ ನಡೆದಿದೆ. ಆದರೆ ಪಂಚಾಯತ್ನವರಿಗೆ ಭಿಕ್ಷಾ ಪಾತ್ರೆ ಇಡಬಹುದಲ್ಲಾ? ಎಂಬ ಪದ ಪ್ರಯೋಗ ಸರಿಯಲ್ಲ ಎಂದು ಸಭೆ ಅಭಿಪ್ರಾಯ ಪಟ್ಟ ಹಿನ್ನಲೆಯಲ್ಲಿ ಗ್ರೂಪಿನ ಅಡ್ಮಿನ್ ಆಗಿರುವ ನಾಗೇಶ್ ಎಂಬವರನ್ನು ಸಭೆಗೆ ಕರೆಸಿ ಅವರು ವಿಷಾದ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ವಿವಾದ ಇತ್ಯರ್ಥಗೊಂಡಿತೆಂದು ತಿಳಿದುಬಂದಿದೆ.