ನೆಲ್ಯಾಡಿ: ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಫೆ.12 ಮತ್ತು 13ರಂದು ನಡೆಯಿತು.
ಫೆ.12ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆದು ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ ಮತ್ತು ಬಜತ್ತೂರು ಗುತ್ತಿನ ನಾಗತಂಬಿಲ, ತೋರಣ ಮುಹೂರ್ತ ನಡೆಯಿತು. ಸಂಜೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ ದೈವವಾದ ಶಿರಾಡಿ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಪಂಜುರ್ಲಿ ಮತ್ತು ಗ್ರಾಮ ದೈವಗಳಿಗೆ ಕೊಡಿನಾಡಿನಲ್ಲಿ ತಂಬಿಲ, ಪ್ರಸಾದ ವಿತರಣೆ ನಡೆಯಿತು. ನಂತರ ಶ್ರೀ ದೇವರ ಬಲಿ ಹೊರಟು, ಪಂಚವಾದ್ಯ ಸೇವೆ, ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತ ಕಟ್ಟೆಪೂಜೆ, ನೃತ್ಯ ಬಲಿ ನಡೆದು ಅನ್ನಸಂತರ್ಪಣೆ ನಡೆಯಿತು. ಫೆ.13ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ಗಣಪತಿ ದೇವರಿಗೆ ಅಪ್ಪಸೇವೆ, ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ ನಡೆಯಿತು. ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ, ಭಂಡಾರ ತೆಗೆದ ನಂತರ ದೇವರ ಪ್ರಸಾದ ವಿತರಣೆ ನಡೆಯಿತು. ನಂತರ ಅನ್ನಸಂತರ್ಪಣೆ, ರಾತ್ರಿ ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಿತು. ದೇವಸ್ಥಾನದ ಅರ್ಚಕ ನಾರಾಯಣ ಬಡೆಕ್ಕಿಲ್ಲಾಯರವರು ಪೂಜಾ ವಿಧಿ ವಿಧಾನದಲ್ಲಿ ಸಹಕರಿಸಿದರು.
ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ಉಪಾಧ್ಯಕ್ಷ ಶಿವರಾಮ ಕಾರಂತ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಟ್ರಸ್ಟಿಗಳಾದ ಲೋಕೇಶ ಗೌಡ, ದುಗ್ಗಪ್ಪ ಗೌಡ, ಶಿವಣ್ಣ ಗೌಡ, ಕುಶಾಲಪ್ಪ ಗೌಡ, ತಾ.ಪಂ.ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು ಹಾಗೂ ಉಪಟ್ರಸ್ಟಿಗಳು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.