ಪುತ್ತೂರು: ಬಡ ನಾಲ್ಕು ಮನೆಗಳಿಗೆ ಅನಾಧಿಕಾಲದಿಂದಲೂ ಓಡಾಡುವ 6 ಅಡಿ ಅಗಲದ ರಸ್ತೆಯನ್ನು ಸ್ಥಳೀಯರೊಬ್ಬರು ಹೊಂಡ ತೆಗೆದು ರಸ್ತೆ ಬಂದ್ ಮಾಡಿ, ಕುಡಿಯುವ ನೀರಿಗೂ ತೊಂದರೆ ನೀಡಿದ್ದಾರೆ. ನಮಗೆ ನಡೆದು ಹೋಗಲು ರಸ್ತೆ ಕೊಡಿ, ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿ ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಪರಿಶಿಷ್ಟ ಪಂಗಡದ ನಾಲ್ಕು ಮನೆಗಳ ಕುಟುಂಬಸ್ಥರು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ನಿರತರಾಗಿದ್ದಾರೆ.
ಪಡುವನ್ನೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಲ್ಕು ಮನೆಗಳಿಗೆ ಹೋಗಲು ಅಂಬಟೆಮೂಲೆ ಮುಖ್ಯ ರಸ್ತೆಯಿಂದ ಸುಮಾರು ೧೦೦ ಅಡಿ ಉದ್ದಕ್ಕೆ ಪರಮೇಶ್ವರಿ ನಾಯ್ಕ ಎಂಬವರಿಗೆ ಸೇರಿದ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನಿನಲ್ಲಿ ಅನಾಧಿಕಾಲದಿಂದಲೂ ಇದ್ದ ಆರು ಅಡಿ ಅಗಲದ ರಸ್ತೆಯಿದ್ದು, ಆದರೆ ರಸ್ತೆಯನ್ನು ಈಗ ಪರಮೇಶ್ವರಿ ಮತು ಅವರ ಮಕ್ಕಳು ಸೇರಿ ಬಂದ್ ಮಾಡಿದ್ದಾರೆ. ಜೊತೆಗೆ ರಸ್ತೆ ಇರುವ ಪರಿಸರದಲ್ಲಿ ಕುಪ್ಪಿ ಚೂರು ಹಕಿ ತೊಂದರೆ ನೀಡಿದ್ದಾರೆ. ಇದರಿಂದಾಗಿ ಆ ಭಾಗದ ನಾಲ್ಕು ಮನೆಗಳಿಗೆ ತೊಂದರೆ ಉಂಟಾಗಿದ್ದು, ಈ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿವರಿಗೂ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ನಮಗೆ ನ್ಯಾಯ ಕೊಡಿ ಎಂದು ನೊಂದ ನಾಲ್ಕು ಮನೆಗಳ ಫಲಾನುಭವಿಗಳು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಧರಣಿ ನಿರತರಾಗಿದ್ದಾರೆ. ಪಡುವನ್ನೂರು ಗ್ರಾಮದ ಅಂಬಟೆಮೂಲೆ ನಿವಾಸಿಗಳಾದ ಯುವರಾಜ್, ಸಂಧ್ಯಾ, ಸಂತೋಷ್, ಚಿತ್ರಾ, ಸಂದೀಪ್, ಹೇಮವಾತಿ, ಚಂದ್ರಹಾಸ, ಗಿರೀಶ್ ಧರಣಿಯಲ್ಲಿ ನಿರತರಾಗಿದ್ದರು. ಮರಾಠಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಶೋಕ್ ನಾಯ್ಕ್, ಈಶ್ವರಮಂಗಲದ ಕೊರಗಪ್ಪ, ನ್ಯಾಯವಾದಿ ಪಡ್ಡಂಬೈಲು, ಶೇಷಪ್ಪ ನೆಕ್ಕಿಲು ಉಪಸ್ಥಿತರಿದ್ದರು.
ನಡೆದು ಹೋಗಲು ರಸ್ತೆ, ಕುಡಿಯಲು ನೀರು ಕೊಡಿ:
ಅನಾಧಿಕಾಲದಿಂದಲೂ ನಮಗೆ ಸರಕಾರಿ ಜಾಗದಲ್ಲಿ ರಸ್ತೆ ಇತ್ತು. ಆದರೆ ಈಗ ಸ್ಥಳೀಯರೊಬ್ಬರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಬಳಿಕ ನಾವು ನಡೆದು ಕೊಂಡು ಹೋಗುತ್ತಿದ್ದೆವು. ಇದೀಗ ಜೆಸಿಬಿ ಮೂಲಕ ದೊಡ್ಡ ಹೊಂಡ ಮಾಡಿ ನಡೆದು ಕೊಂಡು ಹೋಗಲು ಕೂಡಾ ತೊಂದರೆ ನೀಡಿದ್ದಾರೆ. ಇದರ ಜೊತೆಗೆ ಅದೇ ದಾರಿಯಾಗಿ ಬರುವ ಕುಡಿಯುವ ನೀರಿನ ಪೈಪ್ ತುಂಡು ಮಾಡಿ ಕುಡಿಯವ ನೀರಿಗೂ ಅಡ್ಡಿ ಪಡಿಸಿದ್ದಾರೆ. ನಮಗೆ ತುಂಬಾ ಕಷ್ಟ ಕೊಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ತಹಸೀಲ್ದಾರ್ ಅವರಿಗೂ ದೂರು ನೀಡಿದ್ದೇವೆ. ಅವರು ನಾಳೆ, ನಾಳೆ ಎಂದು ದಿನ ದೂಡುತ್ತಿದ್ದಾರೆ. ನನ್ನ ತಾಯಿ ನಾಲ್ಕು ವರ್ಷದಿಂದ ಅನಾರೋಗ್ಯದಿಂದ್ದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಆ ರಸ್ತೆಯಲ್ಲಿ ನಮಗೆ ಅವಕಾಶ ಕೊಡಲಿಲ್ಲ. ರಸ್ತೆ ಬಂದ್ ಮಾಡಿದ ಬಳಿಕ ನಡೆದು ಕೊಂಡು ಹೋಗಬಾರದು ಎಂದು ದಾರಿಗೆ ಕುಪ್ಪಿ ಚೂರು ಹಾಕಿದ್ದರು. ಹಾಗಾಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ನನ್ನ ಅಮ್ಮ ಮೃತಪಟ್ಟಿದ್ದಾರೆ. ಇದರ ಜೊತೆಗೆ ತಂದೆಯೂ ಅನಾರೋಗ್ಯದಿಂದಿದ್ದು, ಅವರಿಗೆ ನಡೆದು ಕೊಂಡು ಹೋಗಲು ಆಗುವುದಿಲ್ಲ – ಸಂಧ್ಯಾ ನೊಂದ ಯುವತಿ