- ಹರ್ಷ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡುವಂತೆ ಆಗ್ರಹ
ಪುತ್ತೂರು: ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಹರ್ಷರವರ ಹತ್ಯೆಯನ್ನು ವಿಶ್ವ ಹಿಂದೂ ಪರಿಷದ್ ಉಗ್ರವಾಗಿ ಖಂಡಿಸುತ್ತದೆ. ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸಿ ಸಮಾಜದ ಶಾಂತಿಯನ್ನು ಕದಡುತ್ತಿರುವ ದೇಶದ್ರೋಹಿ ಸಂಘಟನೆ ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಗಳನ್ನು ಕರ್ನಾಟಕ ಸರ್ಕಾರವು ಈ ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಸಹಾಯಕ ಕಮೀಷನರ್ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದೆ.
ಕೊಲೆಪಾತಕರು ಇಂತಹ ಕಾರ್ಯಕರ್ತರನ್ನೇ ನೇರವಾಗಿ ಗುರಿ ಇಟ್ಟು ಹತ್ಯೆ ಮಾಡುತ್ತಾ ಬಂದಿರುವುದು ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿದ್ದು, ಇದು ಸರ್ಕಾರಕ್ಕೆ ಸವಾಲಾಗಿದ್ದರೆ ಸಾಮಾನ್ಯ ಪ್ರಜೆಯಾದ ಜಾಗೃತ ಹಿಂದೂ ಕಂಗಾಲಾಗಿದ್ದಾನೆ. ಪರಿಸ್ಥಿತಿಯನ್ನು ಹೀಗೆಯೆ ಬಿಟ್ಟರೆ ಇಡೀ ದೇಶಕ್ಕೆ ಗಂಡಾಂತರ ಕಾದಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ.. ಸರ್ಕಾರವು ಎಚ್ಚೆತ್ತುಕೊಂಡು ದಾರುಣ ಹತ್ಯೆ ಮಾಡಿದ ಕೊಲೆಪಾತುಕರನ್ನು ಈ ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಮತ್ತು ನ್ಯಾಯಾಲಯವು ಇವರನ್ನು ಕಠಿಣವಾಗಿ ಶಿಕ್ಷಿಸಿ ಉಗ್ರರಿಗೆ ಎಚ್ಚರಿಕೆಯನ್ನು ನೀಡಬೇಕು. ಘಟನೆಯ ತನಿಖೆಯನ್ನು ಕೇಂದ್ರ ತನಿಖಾದಳಗಳಾದ ಎನ್ ಐ ಎ ಮತ್ತು ಸಿ ಬಿ ಐ ಗೆ ಒಪ್ಪಿಸಿ ಈ ಹತ್ಯೆಯ ಹಿಂದಿರುವ ಸಮಾಜಘಾತುಕರ ಸಂಚನ್ನು ಬಯಲಿಗೆಳೆದು ಅವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ವಿನಂತಿಸುತ್ತೇವೆ.
ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸಿ ಸಮಾಜದ ಶಾಂತಿಯನ್ನು ಕದಡುತ್ತಿರುವ ದೇಶದ್ರೋಹಿ ಸಂಘಟನೆಗಳಾದ PFI ಮತ್ತು SDPI ಸಂಘಟನೆಗಳನ್ನು ಕರ್ನಾಟಕ ಸರ್ಕಾರವು ಈ ಕೂಡಲೇ ನಿಷೇಧಿಸಬೇಕು ಎಂದು ಹಾಗೂ ಹತ್ಯೆಗೊಳಗಾದ 26 ರಹರೆಯದ ತರುಣ ಹರ್ಷ ಬಡ ಕುಟುಂಬದಿಂದ ಬಂದಿದ್ದು ವಯಸ್ಸಾದ ತಂದೆ ತಾಯಿಗಳಿಗೆ ಆಧಾರವಾಗಿದ್ದ. ಪುತ್ರನನ್ನು ಕಳೆದುಕೊಂಡು ನಿರಾಶ್ರಿತರಾಗಿ ದುಃಖತಪ್ತರಾಗಿರುವ ಮೃತ ಹರ್ಷನ ತಂದೆತಾಯಿಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಈ ಕೂಡಲೇ ರೂ. 25 ಲಕ್ಷ ಪರಿಹಾರ ನೀಡುವಂತೆ ಮಾನ್ಯ ಗೃಹಮಂತ್ರಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆ ವತಿಯಿಂದ ಪುತ್ತೂರು ಸಹಾಯಕ ಕಮೀಷನರ್ ಇವರ ಮೂಲಕ ಮಾನ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ,ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ,ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಸಹ ಸಂಯೋಜಕ್ ವಿಶಾಕ್ ಸಸಿಹಿತ್ಲು ಉಪಸ್ಥಿತರಿದ್ದರು.