ಪುತ್ತೂರು: ಆರ್ಯಾಪು ಗ್ರಾಮದ ದಂಬೆತ್ತಿಮಾರು ಮಾಯಿಕಾರೆ ಅಜ್ಜೆ ಸ್ವಾಮಿ ಕೊರಗತನಿಯ ಕ್ಷೇತ್ರಕ್ಕೆ ಭಕ್ತರಿಂದ ಕಲ್ಲಿನ ದೀಪ ಸಮರ್ಪಣೆಯು ಮಾ. 8ರಂದು ನಡೆಯಿತು. ಸಂಪ್ಯದಿಂದ ದಂಬೆತ್ತಿಮಾರುವರೆಗೆ ಮೆರವಣಿಗೆಯಲ್ಲಿ ಕಲ್ಲಿನ ದೀಪವನ್ನು ಕೊಂಡೊಯ್ದು, ಕ್ಷೇತ್ರಕ್ಕೆ ಸಮರ್ಪಿಸಲಾಯಿತು. ಸುಮಾರು ೩ ಅಡಿ ಎತ್ತರದ ಕಲ್ಲಿನ ದೀಪವನ್ನು ಕೊರಗಜ್ಜ ದೈವದ ಕಟ್ಟೆಯ ಬಳಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ದೈವ ನರ್ತಕ ದಾಮೋದರ ಎಂ. ಮಾಲಡ್ಕ ಅವರ ನೇತೃತ್ವದಲ್ಲಿ ಕ್ಷೇತ್ರದ ಯೋಗೀಶ್, ಬಾಲಕೃಷ್ಣ, ಗಣೇಶ್ ಕುಕ್ಕಾಡಿ, ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಪವಿತ್ರ ರೈ, ಜಯಂತ ರೈ ಕಂಬಳತ್ತಡ್ಡ, ಸ್ಥಳೀಯರಾದ ಸೇಸಪ್ಪ ನಾಯ್ಕ ಅಡ್ಕ, ರವಿಚಂದ್ರ ಆರ್ಚಾಯ ಆರ್ಯಾಪು ಮೊದಲಾದವರು ಉಪಸ್ಥಿತರಿದ್ದರು.
ಮಾ. 10, 11ರಂದು ನೇಮೋತ್ಸವ:
ಮಾ. ೧೦ರಂದು ದೈವಗಳ ವಾರ್ಷಿಕ ನೇಮೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆ ೯ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ ೨ಕ್ಕೆ ರಾಹುಗುಳಿಗ ದೈವಕ್ಕೆ ತಂಬಿಲ, ಸಂಜೆ ೪ರಿಂದ ಭಜನೆ, ೬.೪೦ಕ್ಕೆ ದೈವಗಳ ಭಂಡಾರ ಇಳಿದು ಬಳಿಕ ಧಾರ್ಮಿಕ ಕಾರ್ಯಕ್ರಮ, ಸನ್ಮಾನ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಜರುಗಿ, ಚೌಕಾರು ಮಂತ್ರವಾದಿ ಗುಳಿಗ ದೈವದ ನೇಮೋತ್ಸವ, ರಾತ್ರಿ ೧೨ರಿಂದ ಕಲ್ಲುರ್ಟಿ ನೇಮ, ಬಳಿಕ ಕೊರಗತನಿಯ ದೈವದ ನೇಮೋತ್ಸವ ನಡೆಯಲಿದೆ. ಮಾ. ೧೧ರಂದು ಕೊರಗತನಿಯ ದೈವದ ಹರಕೆ ನೇಮೋತ್ಸವ, ಬಳಿಕ ಕದಂಬ ಕೌಶಿಕೆ ಯಕ್ಷಗಾನ ನಡೆಯಲಿದೆ