- ಪ್ರಾಮಾಣಿಕ ಭಕ್ತಿ ಇದ್ದಲ್ಲಿ ದೇವರ ಆಶೀರ್ವಾದ ಖಂಡಿತ ದೊರೆಯುತ್ತದೆ: ಶಶಿಕುಮಾರ್ ರೈ ಬಾಲ್ಯೊಟ್ಟು
ಪುತ್ತೂರು: ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿರುವ ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ದೃಢ ಕಲಶವು ಮಾ.೧೪ ರಂದು ನಡೆಯಿತು. ಬೆಳಿಗ್ಗೆ ಗಣಪತಿ ಹವನ, ದೃಢ ಕಲಶ ಪೂಜೆ, ಪಂಚಗವ್ಯ, ಪಂಚಾಮೃತ ಅಭಿಷೇಕ, ಸಿಯಾಳ ಅಭಿಷೇಕ, ಪರಿಕಲಶ ಅಭಿಷೇಕ, ದೃಢಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಭಾ ಮಂಟಪರಚನೆ ಶಿಲಾನ್ಯಾಸ
ಈ ಸಂದರ್ಭದಲ್ಲಿ ಶ್ರೀ ದೇವಳದ ವಠಾರದಲ್ಲಿ ನೂತನವಾಗಿ ಸಭಾ ಮಂಟಪದ ಶಿಲಾನ್ಯಾಸ ಕಾರ್ಯ ನಡೆಯಿತು. ಮುಂಡೂರು ಮೃತ್ಯುಂಜಯೆಶ್ವರ ದೇವಸ್ಥಾನದ ಅಧ್ಯಕ್ಷರಾದ ಲೋಕಪ್ಪ ಗೌಡ ಕೆರೆಮನೆಯವರು ಸಭಾ ಮಂಟಪದ ಶಿಲಾನ್ಯಾಸ ನೆರವೆರಿಸಿದರು. ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಉಳಿಕೆಯಾಗಿರುವ ೧೦ ಲಕ್ಷ ರೂ ಮೊತ್ತದಲ್ಲಿ ಮಂಟಪದ ಕೆಲಸಗಳು ಆರಂಭವಾಗಲಿದ್ದು, ಭಕ್ತರ ಹಣವನ್ನು ದೇವಳದ ಕಾರ್ಯಕ್ಕೆ ಬಳಕೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ದೇವಸ್ಥಾನ ಅಭಿವೃದ್ದಿಯಾದರೆ ಅದು ಊರು ಅಬಿವೃದ್ದಿಯಾದಂತೆ, ಎಲ್ಲರೂ ಒಟ್ಟಾಗಿ ಶ್ರೀ ಕ್ಷೇತ್ರದ ಅಭ್ಯುದಯಕ್ಕಾಗಿ ಶ್ರಮಿಸೋಣ ಎಂದು ಲೋಕಪ್ಪ ಗೌಡ ಕೆರೆಮನೆ ಹೇಳಿದರು.
ಸಭಾ ಕಾರ್ಯಕ್ರಮ
ಶಿಲಾನ್ಯಾಸದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಪ್ರಮಾಣಿಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತದೆ. ಸಣ್ಣ ದೇವಸ್ಥಾನ ಮತ್ತು ಎತ್ತರದಲ್ಲಿರುವ ದೇವಸ್ಥಾನವೆಂದೇ ಖ್ಯಾತಿ ಪಡೆದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ಹಣದಿಂದಲೇ ಸಭಾ ಮಂಟಪ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರವಾಗಿದೆ.ಬ್ರಹ್ಮಕಲಶಾಧಿ ಕಾರ್ಯಕ್ರಮದಲ್ಲಿ ಹಣ ಉಳಿಕೆಯಾಗಿರುವುದು ಇಲ್ಲಿನ ಜನತೆಯ ಭಕ್ತಿಯ ಕಾರಣದಿಂದ ಎಂದು ಹೇಳಿದ ಅವರು ಎಲ್ಲರೂ ಸೇರಿ ದೇವಸ್ಥಾನದ ಅಭಿವೃದ್ದಿಯನ್ನು ಮಾಡುವಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬ್ರಹ್ಮಕಲಶೋತ್ಸವದಲ್ಲಿ ಉಳಿಕೆಯಾದ ರೂ ೧೦ ಲಕ್ಷ ಮೊತ್ತದಿಂದ ದೇವಳದ ವಠಾರದಲ್ಲಿ ಸಭಾ ಮಂಟಪದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ದೃಡ ಕಲಶ ಸೇರಿದಂತೆ ದೇವಳದಲ್ಲಿ ಇಂದು ವಿವಿಧ ಪೂಜಾ ಕಾರ್ಯಕ್ರಮಗಳು ವಿಜೃಂಭನೆಯಿಂದ ನಡೆದಿದೆ. ಭಕ್ತರ ಸಹಕಾರ ಇದ್ದಲ್ಲಿ ಕ್ಷೇತ್ರ ಅಭಿವೃದ್ದಿಯಾಗಲು ಸಾಧ್ಯ ಎಂಬುದಕ್ಕೆ ಆಲಡ್ಕ ಶ್ರೀ ಸದಾಶಿವ ದೇವಸ್ಥಾನವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ನಡೆಯಲಿ ಎಂದು ಹೇಳಿದರು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣಕುಮಾರ್ ಆಳ್ವ ಬೋಳೋಡಿಗುತ್ತು, ಜೀಣೋಧ್ದಾರ ಸಮಿತಿ ಅಧ್ಯಕ್ಷರಾದ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಭಾಸ್ಕರ ರೈ ಕೆದಂಬಾಡಿಗುತ್ತು, ಜೀರ್ಣೋದ್ದಾರ ಸಮಿತಿ ಕಾಯಾಧ್ಯಕ್ಷರಾದ ಸುರೇಶ್ ಕಣ್ಣಾರಾಯ, ಗೌರವಾದ್ಯಕ್ಷರಾದ ಪ್ರಕಾಶ್ ಪುತ್ತೂರಾಯ ಆಲಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರವಿಶೆಟ್ಟಿ ಮೂಡಂಬೈಲು, ಜೀಣೋದ್ದಾರ ಸಮಿತಿ ಕಾರ್ಯದರ್ಶಿ ಭಾಸ್ಕರ್ ಬಲ್ಲಾಲ್ ಬೀಡು, ಅರ್ಚಕ ಸುಬ್ರಹ್ಮಣ್ಯ ಎನ್ ಕೆ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಮುರಳೀಧರ್ ಭಟ್ ಬಂಗಾರಡ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ದೇವಸ್ಥಾನದ ವಿವಿಧ ಸಮಿತಿಯ ಪದಾಧಿಕಾರಿಗಳಾದ ಪಡ್ಡಂಬೈಲು ಜನಾರ್ಧನ ರೈ ಕೊಡೆಂಕಿರಿ, ಸದಾಶಿವ ರೈ ಪೊಟ್ಟಮುಲೆ, ವಿಶ್ವನಾಥ ರೈ ಕುಕ್ಕುಂಜೋಡು, ಪುಷ್ಪಾ ದಿನೇಶ್, ಮಹಾಬಲ ರೈ ಕುಕ್ಕುಂಜೋಡು, ಜಯಂತಿ ವಿ ರೈ ಬೋಳೋಡಿ, ರುಕ್ಮ ನಾಯ್ಕ್ , ಶೋಭಾ ಭಾಸ್ಕರ್, ಲೋಕೇಶ್ ನಾಯ್ಕ ಬಓಳೋಡಿ, ಪದ್ಮಾವತಿ ಶೀನಪ್ಪ ರೈ ಕೊಡೆಂಕಿರಿ, ಸಂದೇಶ್ ರೈ ಬೋಳೋಡಿಗುತ್ತು, ಪ್ರವೀಣ್ ರೈ ಬೋಳೋಡಿ, ಉಮೇಶ್ ನಾಯ್ಕ್ ಬೋಳೋಡಿ, ಪುಷ್ಪಾ ಆರ್ ರೈ ಮಾನಿಪ್ಪಾಡಿ, ದಾಮೋಧರ, ಸಹಜ್ ರೈ ಪೊಟ್ಟಮೂಲೆ, ಮೋಹಿತ್ ಪೊಟ್ಟಮುಲೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಬಿ ವಿ ಶಗ್ರಿತ್ತಾಯ ವಂದಿಸಿದರು. ಮೋಹನ್ ಆಳ್ವ ಮುಂಡಾಲ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ಶ್ರೀ ಗೋಪಾಲ ಕೃಷ್ಣ ಬಳಗದವರಿಂದ ಭಕ್ತಿಭಾವ ಗಾನ ಸಂಗೀತ ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.