ಪುತ್ತೂರು: ಜೀವನದಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರ ಕುಶಲತೆ ಅಗತ್ಯ. ವಿದ್ಯಾರ್ಥಿಗಳಿಂದ ಸಂತೆ ಎಂಬ ಕಾರ್ಯಕ್ರಮ ವ್ಯಾಪಾರದ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಉಂಟುಮಾಡುತ್ತದೆ ಎಂದು ಮಧುಸೂದನ ಬೈಪಾಡಿತ್ತಾಯ ಬಜಪ್ಪಳ ಹೇಳಿದರು. ಅವರು ಪುರುಷರ ಕಟ್ಟೆಯ ಸರಸ್ವತಿ ವಿದ್ಯಾ ಮಂದಿರದಲ್ಲಿ ವಿದ್ಯಾರ್ಥಿಗಳಿಂದ ಸಂತೆ -ಮೆಟ್ರಿಕ್ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಈ ಮಾತನಾಡಿದರು.
ಮುಖ್ಯ ಅತಿಥಿ ಕಣ್ವತೀರ್ಥ ಮಧುಸೂದನ ಆಚಾರ್ ಮಾತನಾಡಿ, ಶಾಲೆಯಲ್ಲಿ ದೊರಕುವ ಸಂಸ್ಕಾರದ ಅವಶ್ಯಕತೆಯನ್ನು ಒತ್ತಿ ಹೇಳಿದರು. ಪ್ರಥಮ ವ್ಯಾಪಾರವನ್ನು ಮಧುಸೂದನ ಆಚಾರ್ ನೆರವೇರಿಸಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುರೇಶಭಟ್, ಆಡಳಿತಾಧಿಕಾರಿ ಶುಭಾ ಅವಿನಾಶ್ ಉಪಸ್ಥಿತರಿದ್ದರು. ಸಂಚಾಲಕ ಅವಿನಾಶ್ ಕೊಡಂಕಿರಿ ಸ್ವಾಗತಿಸಿ ಮುಖ್ಯಗುರು ರಾಜಾರಾಮವರ್ಮ ವಂದಿಸಿದರು.
30 ಸ್ಟಾಲ್ ಗಳಲ್ಲಿ ತರಕಾರಿ, ಆಭರಣ, ಲೇಖನ ಸಾಮಗ್ರಿ, ಪಾನೀಯ, ಗೃಹೋಪಯೋಗಿ ವಸ್ತುಗಳು, ಸಂಭಾರ ಪದಾರ್ಥಗಳು, ಗಿಡಗಳು, ಹಣ್ಣುಗಳು ಮತ್ತು ತಿಂಡಿ, ತಿನಿಸುಗಳ ಮಾರಾಟ ವಿದ್ಯಾರ್ಥಿಗಳಿಂದ ನಡೆಯಿತು. ಪೋಷಕರು ಮತ್ತು ಊರವರು ಗ್ರಾಹಕರಾಗಿ ಬೆಂಬಲಿಸಿದರು.